ನವದೆಹಲಿ: ದೇಶದ ನಾಲ್ಕು ನಗರಗಳಲ್ಲಿ ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ 'ಪಂಚಗವ್ಯ ಮತ್ತು ಆಯುರ್ವೇದ' ಚಿಕಿತ್ಸೆಯ ಮೂಲಕ 800 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗದ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಕತಿರಿಯಾ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯುವ 'ಗೋ ವಿಜಯಾನ್' (ಹಸು ವಿಜ್ಞಾನ) ಕುರಿತು ಪ್ರಥಮ ರಾಷ್ಟ್ರೀಯ ಪರೀಕ್ಷೆ ಪ್ರಕಟಿಸಿದ ಕತಿರಿಯಾ, ರಾಜ್ಕೋಟ್ ಮತ್ತು ಬರೋಡಾ (ಗುಜರಾತ್), ವಾರಣಾಸಿ (ಉತ್ತರ ಪ್ರದೇಶ) ಮತ್ತು ಕಲ್ಯಾಣ್ದಲ್ಲಿ (ಮಹಾರಾಷ್ಟ್ರ) ತಲಾ 200 ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು 2020ರ ಜೂನ್ ಮತ್ತು ಅಕ್ಟೋಬರ್ ನಡುವೆ ರಾಜ್ಯ ಸರ್ಕಾರಗಳು ಮತ್ತು ಕೆಲವು ಎನ್ಜಿಒಗಳ ಸಹಭಾಗಿತ್ವದಲ್ಲಿ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ಗಂಗೂಲಿ ರಾಯಭಾರಿಯ ಫಾರ್ಚೂನ್ ಅಡುಗೆ ಎಣ್ಣೆ ಜಾಹೀರಾತು ತಾತ್ಕಾಲಿಕ ಸ್ಥಗಿತ
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಆರ್ಕೆಎಯನ್ನು 2019ರ ಫೆಬ್ರವರಿಯಲ್ಲಿ ಹಸುಗಳ ಪೋಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಅವುಗಳ ಸಂತತಿಗಾಗಿ ಸ್ಥಾಪಿಸಲಾಯಿತು.
ಕಾಮದೇನು ಆಯೋಗ ಕ್ಲಿನಿಕಲ್ ಪ್ರಯೋಗದಲ್ಲಿ ಜ್ಞಾನ ಪಾಲುದಾರನಾಗಿದ್ದು, ಶೀಘ್ರದಲ್ಲೇ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಆಯುಷ್ ಸಚಿವಾಲಯಕ್ಕೆ ಸಲ್ಲಿಸಲಿದ್ದೇವೆ. ಚಿಕಿತ್ಸೆಯಲ್ಲಿ 'ಪಂಚಗವ್ಯ' ಸಣ್ಣಕಣಗಳ (ಹಸುವಿನ ಮೂತ್ರ, ಹಸುವಿನ ಸಗಣಿ, ಹಾಲು, ತುಪ್ಪ ಮತ್ತು ಮೊಸರು ಮಿಶ್ರಣ) ಮೂಲಿಕೆ 'ಸಂಜೀವನಿ ಬೂಟಿ' ಮತ್ತು ಗಿಡಮೂಲಿಕೆಗಳ ಮಿಶ್ರಣ 'ಖಡಾ' ಒಳಗೊಂಡಿದೆ ಎಂದು ಸುದ್ದಿಗಾರರಿಗೆ ಹೇಳಿದರು.
ಆಯುಷ್ ಸಚಿವಾಲಯದ ಮಾನದಂಡಗಳ ಪ್ರಕಾರವೇ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ. ಕೋವಿಡ್-19 ಪಾಸಿಟಿವ್ ರೋಗಿಗಳು ಸ್ವಯಂಪ್ರೇರಿತರಾಗಿ ಪ್ರಯೋಗಗಳಲ್ಲಿ ಭಾಗವಹಿಸಲು ಒಪ್ಪಿ ಅಗತ್ಯ ದಾಖಲೆಗಳಿಗೆ ಸಹಿ ಹಾಕಿದ್ದರು ಎಂದರು.