ನವದೆಹಲಿ : ಕೇಂದ್ರ ಬಜೆಟ್ನಲ್ಲಿ ರಕ್ಷಣೆಗೆ ಮೀಸಲಿಟ್ಟ ಹಣ ಯಾವುದಕ್ಕೂ ಸಾಲುವುದಿಲ್ಲ ಎಂಬ ಹಲವು ಟೀಕೆಗಳ ನಡುವೆ, ಹೆಚ್ಚುತ್ತಿರುವ ಪಿಂಚಣಿ ಬಜೆಟ್ ಸಮಸ್ಯೆಯನ್ನು ನಿರ್ವಹಿಸಲು ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತಹ ಕ್ರಮ ಕೈಗೊಳ್ಳಬೇಕು ಇದರಿಂದ, ಯಾವುದೇ ಕಳವಳಗಳು ಉಂಟಾಗುವುದಿಲ್ಲವೆಂದು ಎಂದು ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಭಾನುವಾರ ಹೇಳಿದ್ದಾರೆ.
ರಕ್ಷಣೆ ಇಲಾಖೆಯೂ ಸಂಪನ್ಮೂಲದ ಕ್ರೂಢೀಕರಣಕ್ಕೆ 'ಮೇಕ್ ಇನ್ ಇಂಡಿಯಾ'ದಂತಹ ಬೇರೆ ದಾರಿಯನ್ನು ಕಂಡುಕೊಳ್ಳಬೇಕು. ಇದು ಶಸ್ತ್ರಾಸ್ತ್ರಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮೂಲಸೌಕರ್ಯ ನಿಧಿಯಿಂದ ಹಣವನ್ನು ಪಡೆಯುತ್ತದೆ ಹಾಗೂ ಸೈನಿಕರಿಗೆ ಮನೆಗಳನ್ನು ನಿರ್ಮಿಸಲು ರಕ್ಷಣಾ ಭೂಮಿಯನ್ನು ಬಳಸುವಂತಹ ಯೋಜನೆ ರೂಪಿಸಬೇಕು ಎಂದರು.
ಮಾಧ್ಯಮವೊಂದರ ಜೊತೆ ಈ ಕುರಿತು ಮಾತನಾಡಿದ ಜನರಲ್ ರಾವತ್, " ನಮ್ಮ ಅವಶ್ಯಕತೆಗಳೇ ನಮ್ಮ ಮೊದಲ ಆದ್ಯತೆಯಾಗಿದ್ದು, ಅವಶ್ಯಕತೆಗಳ ಪೂರೈಕೆಗೂ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. ಅದರ ಹೊರತಾಗಿ ಬೇರೆನಿಲ್ಲ ಎಂದರು. ಸಿಡಿಎಸ್ ರಕ್ಷಣಾ ಬಜೆಟ್ ಬಗ್ಗೆ ಪ್ರತಿಕ್ರಿಯಿಸುತ್ತಿದ್ದು, ಇದನ್ನು ಶೇಕಡಾ 6 ರಷ್ಟು ಹೆಚ್ಚಿಸಿ 3.37 ಲಕ್ಷ ಕೋಟಿ ರೂ.ಗಳನ್ನಾಗಿ ಮಾಡಲಾಗಿದೆ, ಆದರೆ ಹಲವಾರು ತಜ್ಞರು ಇದನ್ನು ಅಸಮರ್ಪಕ ಎಂದು ಹೇಳಿದ್ದಾರೆ. ಬಜೆಟ್ ನಿರ್ವಹಣೆಯ ಬಗ್ಗೆ ಕೇಳಿದಾಗ, "ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ, ಮೂರು ಸೇವೆಗಳ ಸಮತೋಲಿತ ಆಧುನೀಕರಣವನ್ನು ಗಮನದಲ್ಲಿಟ್ಟುಕೊಂಡು ಉಪಕರಣಗಳ ಸಂಗ್ರಹಕ್ಕೆ ಆದ್ಯತೆ ನೀಡುವುದು ನನ್ನ ಆದೇಶ" ಎಂದು ಹೇಳಿದರು.