ಅಮರಾವತಿ: 2020ರ ಖಾರಿಫ್ ಋತುವಿನಲ್ಲಿ ಬೆಳೆ ಹಾನಿ ಮತ್ತು ನಷ್ಟ ಅನುಭವಿಸಿದ 15.15 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ 'ವೈಎಸ್ಆರ್ ಉಚಿತ ಬೆಳೆ ವಿಮೆ' ಯೋಜನೆಯಡಿ 1820.23 ಕೋಟಿ ರೂ. ಪಾವತಿಸಿದ್ದಾರೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಕಠಿಣ ಸಮಯದಲ್ಲಿ ರೈತರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ. ಹೀಗಾಗಿ ರೈತರ ಮೇಲೆ ಪ್ರೀಮಿಯಂ ಹೊರೆ ವಿಧಿಸದೆ ಉಚಿತ ಬೆಳೆ ವಿಮಾ ಯೋಜನೆ ನೀಡಲಾಗಿದೆ ಎಂದರು.
ಇ-ಕ್ರಾಪ್ ಪ್ಲಾಟ್ಫಾರ್ಮ್ಗೆ ದಾಖಲಾದ ಎಲ್ಲಾ ರೈತರು ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ತಮ್ಮ ವಿಮೆ ಪಾಲು ಪಡೆಯಲಿದ್ದಾರೆ. ಇದನ್ನು ಖಾತ್ರಿಪಡಿಸಲು ಸಂಪೂರ್ಣ ವಿಮಾ ಕಂತುಗಳನ್ನು ಪಾವತಿಸುವ ಮೂಲಕ ರಾಜ್ಯ ಸರ್ಕಾರ ಈ ಯೋಜನೆ ಪರಿಷ್ಕರಿಸಿತು.
ಕಳೆದ 23 ತಿಂಗಳಲ್ಲಿ ಈ ಬೆಳೆ ವಿಮಾ ಯೋಜನೆಗೆ ಒಟ್ಟು 3,788.25 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಹಿಂದಿನ ಸರ್ಕಾರವು 715.84 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. ಇದಲ್ಲದೇ ಕಳೆದ 23 ತಿಂಗಳಲ್ಲಿ ರಾಜ್ಯ ಸರ್ಕಾರ ರೈತ ಕಲ್ಯಾಣಕ್ಕಾಗಿ 83,000 ಕೋಟಿ ರೂ. ಖರ್ಚು ಮಾಡಿದೆ. ರೈತ ಭರವಸೆಗೆ ಮಾತ್ರ 17,029 ಕೋಟಿ ರೂ. ವ್ಯಯವಾಗಿದೆ.