ಆನೇಕಲ್: ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನಲೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಸಿಬ್ಬಂದಿ ಕೊರತೆ ಒತ್ತಡದಲ್ಲಿಯೂ ದಿನನಿತ್ಯದ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ಪೊಲೀಸರು ಚುನಾವಣಾ ಪೂರ್ವ ತಯಾರಿಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ರೌಡಿಗಳಿಂದ ಬೆದರಿಕೆ, ಓಲೈಕೆ, ವಿನಾಕಾರಣ ಒತ್ತಡ ಹೇರುವುದನ್ನು ತಪ್ಪಿಸಲು ಬೆಂಗಳೂರು ನಗರ ಜಿಲ್ಲಾ ಆನೇಕಲ್ ಉಪ ವಿಭಾಗದಲ್ಲಿನ ರೌಡಿಗಳನ್ನು ಒಂದೆಡೆ ಸೇರಿಸಿ ಬೆಂಗಳೂರು ಗ್ರಾಮಾಂತರ ನೂತನ ಎಸ್ಪಿ ರಾಮ್ ನಿವಾಸ್ ಸೆಪಟ್ ಕಟ್ಟೆಚ್ಚರ ನೀಡಿದರು.
ಏಕಾಏಕಿ 176 ಮಂದಿ ರೌಡಿಶೀಟರ್ಗಳನ್ನು ಆನೇಕಲ್ ಪಟ್ಟಣದ ಹೊಸ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಕರೆಸಿ ಅವರಿಂದ ಛಾಪಾ ಕಾಗದದಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆಯ ಸೂಚನೆ ನೀಡಿದರು. ಸಾರ್ವಜನಿಕರ ಎದುರು ಮುಖ ತೋರಿಸಲು ರೌಡಿಗಳು ಹೆಣಗಾಡುತ್ತಿದ್ದುದು ಕಂಡು ಬಂತು. ಡಿವೈಎಸ್ಪಿ ನಂಜುಂಡೇಗೌಡ, ಉಪವಿಭಾಗದ ಎಲ್ಲ ಸಿಐ, ಎಸ್ಐಗಳೊಂದಿಗೆ ಪೊಲೀಸ್ ಸಿಬ್ಬಂದಿ ರೌಡಿ ಪರೇಡ್ನಲ್ಲಿ ಭಾಗವಹಿಸಿದ್ದರು.
ಒಟ್ಟು 621 ಮಂದಿ ರೌಡಿ ಶೀಟರ್ಗಳಿದ್ದು, ಅದರಲ್ಲಿ 245 ಮಂದಿ ವೈಯಕ್ತಿಕವಾಗಿ ಠಾಣೆಗೆ ಬಂದು ಬಾಂಡ್ ಮೂಲಕ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಉಳಿದಂತೆ ಕೆಲ ರೌಡಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮುಂದಿನ ಹಂತದಲ್ಲಿ ಇನ್ನುಳಿದ ರೌಡಿಗಳನ್ನು ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಲಾಗುವುದೆಂದು ಎಸ್ಪಿ ತಿಳಿಸಿದರು.