ಅಥಣಿ: ತಾಲೂಕು ಪಂಚಾಯತ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆನಂದ ಮಹದೇವ ಕುಳಲಿ ಕೋವಿಡ್ ಮತ್ತು ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದರು. ರಾಜ್ಯ ಸರ್ಕಾರ ನೆರವಿನ ಹಸ್ತ ನೀಡುವಂತೆ ಕುಟುಂಬ ಕೇಳಿಕೊಂಡಿದ್ದರು. ವಿಷಯ ತಿಳಿದ ತಕ್ಷಣವೇ ಡಿಸಿಎಂ ಲಕ್ಷ್ಮಣ ಸವದಿ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ತಿಳಿಸಿದ್ದಾರೆ.
ಆನಂದ ಕುಳಲಿ ಕೆಲವು ದಿನಗಳ ಹಿಂದೆ ಈ ಸೋಂಕಿಗೆ ಸಿಲುಕಿ ಮಹಾರಾಷ್ಟ್ರ ಆಸ್ಪತ್ರೆಗೆ ಸೇರಿದ್ದರೂ ಅವರಿಗೆ ಹೆಚ್ಚಿನ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದರು. ಕುಟುಂಬ ವರ್ಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಕ್ಷಣ ಸವದಿಯವರು ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರನ್ನು ಸಂಪರ್ಕಿಸಿ, ಈ ರೋಗಿಯ ಜೀವ ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತಿರುವ ಬ್ಲ್ಯಾಕ್ ಫಂಗಸ್ ವಿಶೇಷ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ.
ಅಷ್ಟೇ ಅಲ್ಲ, ಈ ಚಿಕಿತ್ಸೆಗೆ ಅಗತ್ಯವಾದ ವೆಚ್ಚವನ್ನು ತಾವೇ ಸ್ವಂತ ಭರಿಸುವುದಾಗಿಯೂ ತಿಳಿಸಿದ್ದಾರೆ. ಸವದಿಯವರ ಮನವಿಗೆ ಡಾ. ಸುಧಾಕರ್ ಅವರು ಕೂಡ ತಕ್ಷಣ ಸ್ಪಂದಿಸಿ ಆನಂದ ಕುಳಲಿ ಅವರ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಟ್ಟು, ತಮ್ಮ ಕಾಳಜಿ ಮತ್ತು ಕರ್ತವ್ಯಪ್ರಜ್ಞೆ ಸಾಬೀತುಪಡಿಸಿದ್ದಾರೆ.
ಸವದಿ ಅವರ ಸಕಾಲಿಕ ಸ್ಪಂದನೆಯಿಂದಾಗಿ ತೀವ್ರ ಆತಂಕದಲ್ಲಿದ್ದ ಕುಳಲಿ ಅವರ ಕುಟುಂಬವು ಈಗ ನಿಟ್ಟುಸಿರು ಬಿಡುವಂತಾಗಿದೆ. ಸಂಕಷ್ಟ ಕಾಲದಲ್ಲಿ ನೆರವಿಗೆ ಬಂದ ಡಿಸಿಎಂ ಲಕ್ಷ್ಮಣ್ ಸವದಿಗೆ ಕುಟುಂಬ ವರ್ಗದವರು ಧನ್ಯವಾದ ಸಲ್ಲಿಸಿದ್ದಾರೆ.