ಹುಬ್ಬಳ್ಳಿ : ಈ ದೇಶದಲ್ಲಿ 2014 ರಿಂದ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪಕ್ಷ ಸಂಘಟನೆಯಲ್ಲಿ ನಮ್ಮ ಪಕ್ಷ ಮಂಕಾಗಿರುವುದರಿಂದ ಪಕ್ಷ ಸಂಘಟನೆಗಾಗಿ ನಗರದಲ್ಲಿ ಮಾರ್ಚ್ 7 ಮತ್ತು 8 ರಂದು ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈ. ಎಸ್. ವಿ ದತ್ತಾ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶನಿವಾರ ಮುಂಬೈ ಕರ್ನಾಟಕ ಸೇರಿದಂತೆ ಎಂಟು ಘಟಕಗಳ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮಾಜಿ ಪ್ರಧಾನಿ ದೇವೇ ಗೌಡರು ಬರುತ್ತಿದ್ದು ಈ ಸಂದರ್ಭದಲ್ಲಿ ಜನತಾ ಪರಿವಾರದ ಹುಟ್ಟು ಮತ್ತು ಜನಾಂದೋಲನ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಂತರ ಜನತಾ ಪರಿವಾರ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪಕ್ಷದ ಪ್ರಚಾರವನ್ನು ಹೇಗೆ ಮಾಡಬೇಕೆಂಬ ಚರ್ಚೆ ಮಾಡಲಾಗುತ್ತದೆ ಎಂದರು.
ಎರಡನೇ ದಿನ ಪಕ್ಷದ ಕಾರ್ಯಕರ್ತರ ಜೊತೆ ಪರಸ್ಪರ ವಿಚಾರ ವಿನಿಮಯಗಳು ನಡೆಯುತ್ತವೆ. ನಾಳೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಮಕಾಲೀನ ರಾಜಕಾರಣದ ಬಗ್ಗೆ ದೇವನೂರು ಮಹಾದೇವಪ್ಪ ಬರೆದ "ಇಂದು ಭಾರತ ಮಾತನಾಡುತ್ತಿದೆ" ಮತ್ತು ದೇವೇಗೌಡ್ರು ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಹೇಳುವ ಎರಡು ಪುಸ್ತಕಗಳು ಬಿಡುಗಡೆ ಮಾಡಲಾಗುವುದು ಎಂದರು.