ಸುರಪುರ (ಯಾದಗಿರಿ): ಜೂನ್ 18 ರಂದು ತಾಲೂಕಿನ ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಹುಟ್ಟುಹಬ್ಬವಿದ್ದು, ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸದಂತೆ ಭಕ್ತರಿಗೆ ಕರೆ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಇದೇ ತಿಂಗಳ 18ರಂದು ನನ್ನ ಜನುಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಅನೇಕ ಜನ ಭಕ್ತರು ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ವರ್ಷ ಯಾರೂ ನನ್ನ ಜನ್ಮ ದಿನವನ್ನು ಆಚರಿಸಬೇಡಿ. ಇದರ ಬದಲು ಎಲ್ಲಾ ಭಕ್ತಾಧಿಗಳು ತಮ್ಮ ತಮ್ಮ ಊರು ಮತ್ತು ಮನೆಗಳ ಮುಂದೆ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಕಾಳಜಿಯನ್ನು ತೋರಿದಲ್ಲಿ ಅದುವೇ ನನಗೆ ತಾವು ನೀಡುವ ಜನುಮದಿನದ ಉಡುಗೊರೆ ಎಂದು ಹೇಳಿದ್ದಾರೆ.
ಈ ವರ್ಷ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಜನರು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ಜನ್ಮ ದಿನ ಆಚರಿಸುವುದು ಸರಿಯಲ್ಲ. ಇದರ ಬದಲು ಪರಿಸರ ಪ್ರೇಮವನ್ನು ತೋರುವಂತೆ ತಿಳಿಸಿದ್ದಾರೆ.