ಚಾಮರಾಜನಗರ: ಕೊರೊನಾ ಲಾಕ್ಡೌನ್ ವೇಳೆ ಫೇಸ್ ಬುಕ್ ನಲ್ಲಿ ಹರಟುತ್ತಾ, ಟಿವಿ ನೋಡುತ್ತಾ, ಡಬ್ಸ್ಮಾಶ್ ಮಾಡುತ್ತಿರುವವರ ನಡುವೆ ಇವರು ತುಂಬಾನೆ ವಿಭಿನ್ನ. ಸಾಮಾಜಿಕ ಜಾಲತಾಣದ ಮೂಲಕ ದಾನಿಗಳನ್ನು ಹುಡುಕಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ.
ಹೌದು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಎಂಬುವರು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನ್ನು ಸಾರ್ಥಕ ಕಾರ್ಯಕ್ಕೆ ಬಳಸಿಕೊಳ್ಳುತ್ತಾ ಬಂದಿದ್ದು, ತನ್ನ ಶಾಲೆಯ ವಿದ್ಯಾರ್ಥಿಗಳ ಬಡ ಕುಟುಂಬಕ್ಕೂ ಈಗ ಫೇಸ್ ಬುಕ್ ನಲ್ಲೇ ಉತ್ತರ ಕಂಡುಕೊಳ್ಳುವಂತೆ ಮಾಡಿದ್ದಾರೆ.
ಕೂಲಿಗಾಗಿ ಲಾಕ್ಡೌನ್ ವೇಳೆ ಬೇರೆ ಊರುಗಳಿಗೆ ತೆರಳಲಾಗದೇ, ಹಣವೂ ಇಲ್ಲದೇ ಪರಿತಪಿಸುತ್ತಿದ್ದ ತನ್ನ ವಿದ್ಯಾರ್ಥಿಗಳ ಕುಟುಂಬದ ಪರಿಸ್ಥಿತಿ ಅರಿತ ನಾರಾಯಣ ಅವರು, ಫೇಸ್ ಬುಕ್ ಮೂಲಕ ದಾನಿಗಳನ್ನು ಹುಡುಕಿ ವಿದ್ಯಾರ್ಥಿ ಕುಟುಂಬಕ್ಕೆ 20 ದಿನಕ್ಕಾಗುವಷ್ಟು ಅಕ್ಕಿ, ಧಾನ್ಯ, ಹಿಟ್ಟು, ಎಣ್ಣೆ, ಸೇರಿದಂತೆ ಇನ್ನಿತರೆ ಆಹಾರ ಸಾಮಗ್ರಿಗಳು ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದಾರೆ.
ದಿನಸಿ ಅಂಗಡಿಗಳಿಗೆ ನೇರವಾಗಿ ದಾನಿಗಳು ಆನ್ಲೈನ್ ಮನಿ ಟ್ರಾನ್ಸಫರ್ ಮಾಡಲಿದ್ದು, ನಾರಾಯಣ ಅವರು ತಮ್ಮ ಬೈಕ್ನಲ್ಲಿ ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಆಹಾರಕಿಟ್ ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಈಗಾಗಲೇ 60 ವಿದ್ಯಾರ್ಥಿಗಳ ಕುಟುಂಬವನ್ನು ಗುರುತಿಸಿದ್ದು, 20 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ್ದಾರೆ.
ದಾನಿಗಳ ಸೇವೆ ನೋಡಿಕೊಂಡು ಸಂಕಷ್ಟದಲ್ಲಿರುವ ಮತ್ತಷ್ಟು ಮಂದಿಯ ಪಟ್ಟಿ ತಯಾರಿಸಲಿದ್ದಾರಂತೆ ನಾರಾಯಣ. ಈಗಾಗಲೇ, ಆನ್ಲೈನ್ ಕ್ಲಾಸಿಗೆ ನೆರವಾಗಲೆಂದು 10 ವಿದ್ಯಾರ್ಥಿಗಳಿಗೆ ಮೊಬೈಲ್, ಓರ್ವ ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ಅನ್ನು ಕೂಡಲು ನಿರ್ಧರಿಸಿ, ಎಫ್ಬಿ ಮೂಲಕವೇ ದಾನಿಗಳನ್ನು ಹುಡುಕಿ ವಿತರಣೆ ಮಾಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಒಂದು ಶಕ್ತಿಶಾಲಿ ಮಾಧ್ಯಮ, ಅದನ್ನು ಸರಿಯಾಗಿ ಬಳಸಿಕೊಂಡರೇ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಎಂಬುದಕ್ಕೆ ಶಿಕ್ಷಕ ನಾರಾಯಣ ಅವರ ಕಾರ್ಯ ಮಾರ್ಗದರ್ಶನವಾಗಿದೆ.