ನವದೆಹಲಿ: ಯಮುನಾ ನದಿಯಲ್ಲಿ ಹೆಚ್ಚಿನ ಮಾಲಿನ್ಯ ಮಟ್ಟವನ್ನು ಉಲ್ಲೇಖಿಸಿರುವ ದೆಹಲಿ ಸರ್ಕಾರ ನದಿಯ ಕೆಲವು ಭಾಗಗಳಲ್ಲಿ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದೆ. ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಗಳ ದೃಶ್ಯಗಳು ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ತಜ್ಞರ ಪ್ರಕಾರ, ನದಿಯಲ್ಲಿನ ಮಾಲಿನ್ಯಕ್ಕೆ ಸಾಬೂನು ಮತ್ತು ಮಾರ್ಜಕಗಳು ಪ್ರಮುಖ ಕಾರಣ. ಹಾಗಾಗಿ, ಸಾರ್ವಜನಿಕ ಆದೇಶದ ಎರಡು ಭಾಗಗಳಲ್ಲಿ ಮೀನುಗಾರಿಕೆಗೆ ಪರವಾನಗಿ ನೀಡುವುದನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ದೆಹಲಿಯ ಪಶುಸಂಗೋಪನಾ ಇಲಾಖೆಯು ಹೊರಡಿಸಿದ ಅಧಿಸೂಚನೆಯಲ್ಲಿ ಇದನ್ನು ತಿಳಿಸಲಾಗಿದೆ.
ಹಿಂಡನ್ ಕಾಲುವೆ, ಗಾಜಿಪುರ ಡ್ರೈನ್ ಮತ್ತು ಶಾದಿಪುರ್ ಡ್ರೈನ್ (ರಸ್ತೆ ಡ್ರೈನ್ 0 ರಿಂದ 17,000) ಮತ್ತು ಯಮುನಾ ನದಿಯ ಒಂದು ಭಾಗ, ಗ್ರೋಯ್ನ್ ಸಂಖ್ಯೆ 85 (ಡೌನ್ಸ್ಟ್ರೀಮ್), ನ್ಯೂ ಓಖ್ಲಾ ಬ್ಯಾರೇಜ್, ದೆಹಲಿ ಗಡಿಯವರೆಗೆ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಯುಮುನಾ ನದಿಯಲ್ಲಿ ಹರಿಯುತ್ತಿದೆ ವಿಷಕಾರಿ ನೊರೆ-ವಿಡಿಯೋ ನೋಡಿ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರ ಪ್ರಕಾರ, ಯಮುನಾ ನದಿಯಲ್ಲಿ ವಿಷಕಾರಿ ಫೋಮ್ ರಚನೆಗೆ ತ್ಯಾಜ್ಯ ನೀರಿನಲ್ಲಿ ಹೆಚ್ಚಿನ ಫಾಸ್ಫೇಟ್ ಅಂಶವಿರುವುದೇ ಕಾರಣವಾಗಿದೆ. ಏಕೆಂದರೆ ಬಣ್ಣದ ಉದ್ಯಮಗಳು, ಮನೆಗಳು ಮತ್ತು ಧೋಬಿ ಘಾಟ್ಗಳಲ್ಲಿ ಡಿಟರ್ಜೆಂಟ್ಗಳನ್ನು ಬಳಸಲಾಗುತ್ತದೆ. ಇದೇ ಯಮುನೆಯಲ್ಲಿನ ಕಲ್ಮಶಕ್ಕೆ ಕಾರಣ ಎನ್ನಲಾಗಿದೆ.
ಯಮುನಾ ನದಿಯಲ್ಲಿನ ಮಾಲಿನ್ಯವನ್ನು ತಡೆಗಟ್ಟಲು ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್ನ ಇತ್ತೀಚಿನ ಮಾನದಂಡಗಳಿಗೆ ಅನುಗುಣವಾಗಿರದ ಸಾಬೂನು ಮತ್ತು ಡಿಟರ್ಜೆಂಟ್ಗಳ ಮಾರಾಟ, ಸಂಗ್ರಹಣೆ, ಸಾರಿಗೆ ಮತ್ತು ಮಾರಾಟವನ್ನು ದೆಹಲಿ ಸರ್ಕಾರ ಇತ್ತೀಚೆಗೆ ನಿಷೇಧಿಸಿತ್ತು.