ಬೆಂಗಳೂರು: ಭಾರತೀಯರ ನೆಚ್ಚಿನ ಮತ್ತು ಅಗ್ಗದ ಪ್ರಯಾಣ ಎಂದರೆ ಅದುವೇ ರೈಲ್ವೆ ಪ್ರಯಾಣ. ಆರಾಮದಾಯಕ ಪ್ರವಾಸಕ್ಕೆ ಬಹುತೇಕ ಜನರು ಒಲವು ತೋರುವುದು ಭಾರತೀಯ ರೈಲ್ವೆಗೆ. ದೀರ್ಘಕಾಲದ, ರಾತ್ರಿ ಪ್ರಯಾಣಗಳು ರೈಲಿನಲ್ಲಿ ಹಿತಕರ ಕೂಡ. ಕಾರಣ ರೈಲಿನಲ್ಲಿ ಆರಾಮಾಗಿ ಓಡಾಡುವುದರ ಜೊತೆಗೆ ರಾತ್ರಿ ನಿದ್ದೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಮಕ್ಕಳಲ್ಲಿ ಈ ರೈಲು ಸದಾ ಕೌತುಕ ಮೂಡಿಸುತ್ತದೆ. ಇದೇ ಕಾರಣಕ್ಕೆ ರೈಲಿನ ಮೊದಲ ಪ್ರಯಾಣ ಬಲು ಸೊಗಸಾಗಿರುತ್ತದೆ. ದೇಶದಲ್ಲಿ ಅತ್ಯಂತ ಉದ್ದದ ಸಂಪರ್ಕ ವ್ಯವಸ್ಥೆ ಹೊಂದಿರುವ ಈ ರೈಲುಗಳು ಪ್ರಯಾಣದ ಅನುಭವವೇ ಮಜವಾಗಿರುತ್ತದೆ.
ಇಂತಹ ಅದ್ಬುತ ರೈಲ್ವೆ ಪ್ರಯಾಣದ ಅನುಭೂತಿ ಪ್ರತಿಯೊಬ್ಬರ ಬಳಿ ಇರುತ್ತದೆ. ಅನೇಕ ಬಾರಿ ಇದನ್ನು ಆಪ್ತರ ಬಳಿ ಹೇಳಿರುತ್ತೇವೆ. ಇದೀಗ ನೀವು ಆ ಕಥೆಯನ್ನು ಭಾರತೀಯ ರೈಲ್ವೆಗೆ ಹೇಳಿ ಬಹುಮಾನ ಕೂಡ ಗೆಲ್ಲಬಹುದಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಸ್ಪರ್ಧೆ ಏರ್ಪಡಿಸಿದ್ದು, ಇದರ ಮಾಹಿತಿ ಇಲ್ಲಿದೆ.
ಏನಿದು ಸ್ಪರ್ಧೆ: 'ರೈಲ್ವೆ ಯಾತ್ರಾ ವೃತ್ತಾಂತ ಪುರಸ್ಕರ್ ಯೋಜನೆ' (ರೈಲು ಪ್ರಯಾಣದ ಸ್ಪರ್ಧೆ) ಅಡಿ ಭಾರತದ ನಿವಾಸಿಗಳು ತಮ್ಮ ಅತ್ಯದ್ಬುತ ರೈಲ್ವೆ ಪ್ರಯಾಣದ ಕುರಿತು ಅನುಭವಗಳನ್ನು ಬರೆದು ರೈಲ್ವೆ ಇಲಾಖೆಗೆ ಬರೆದು ಕಳಿಸಬಹುದು. ಅತ್ಯದ್ಭುತ ರೈಲು ಪ್ರಯಾಣದ ಅನುಭವ ಬರೆದು ಆಯ್ಕೆಗೊಂಡವರಿಗೆ 10 ಸಾವಿರ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಎರಡನೇ ಸ್ಪರ್ಧಿಗೆ 8 ಸಾವಿರ ರೂ, ಮೂರನೇ ಬಹುಮಾನ ಪಡೆದವರಿಗೆ 6 ಸಾವಿರ ರೂ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ 5 ಸಮಾಧಾನಕರ ಬಹುಮಾನ ಇದೆ. ಇವರಿಗೆ ತಲಾ 4 ಸಾವಿರ ಬಹುಮಾನ ಇದೆ.
ಇನ್ನು ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ನಾರ್ಥ್ ಸೆಂಟ್ರಲ್ ರೈಲ್ವೆಯ ಅಧಿಕಾರಿ ಆಗಿರುವ ಹಿಮಾಂಶು ಶೇಖರ್ ಉಪಾಧ್ಯಯ ಮಾತನಾಡಿ, ಭಾರತೀಯ ರೈಲ್ವೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಸ್ಪರ್ಧೆಯನ್ನು ಮಾಡಲಾಗಿದೆ. ಅನುಭವ ಕಥಾನಕಗಳು 3,500 ಪದಗಳನ್ನು ಮೀರಬಾರದು. ಈ ಅನುಭವವನ್ನು ಸಹಾಯಕ ನಿರ್ದೇಶಕರು , ಹಿಂದಿ (ಟ್ರೈನಿಂಗ್), ರೈಲ್ವೆ ಬೋರ್ಡ್ ಇಲ್ಲಿಗೆ ಪತ್ರದ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು. ಈ ಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 31 ಆಗಿದೆ.
ಪತ್ರ ಬರೆಯುವ ಶೈಲಿ: ಇನ್ನು ಅನುಭವ ಕಥನಾವನ್ನು ಬಿಳಿ ಹಾಳೆಯಲ್ಲಿ ಎರಡು ಬದಿಯಲ್ಲಿ ಡಬ್ಬಲ್ ಸ್ಪೇಸ್ ಜಾಗ ಬಿಟ್ಟು ಬರೆಯಬೇಕು. ಪ್ರತಿ ಹಾಳೆಯಲ್ಲಿ ಸರಿಯಾಗಿ ಸಂಖ್ಯೆಯನ್ನು ನಮೂದಿಸಬೇಕು.
ಇನ್ನು ಕಥೆಯ ಆರಂಭಕ್ಕೂ ಮೊದಲು ಪ್ರತ್ಯೇಕ ಪುಟದಲ್ಲಿ ಹೆಸರು, ಹುದ್ದೆ, ವಯೋಮಿತಿ, ಕಚೇರಿ ಅಥವಾ ಮನೆ ವಿಳಾಸ, ಮೊಬೈಲ್ ಸಂಖ್ಯೆ, ಇ ಮೇಲ್ ನಂಬರ್, ಕಥೆಯ ಪದಗಳ ಸಂಖ್ಯೆಯನ್ನು ಸ್ಪರ್ಷವಾಗಿ ದೊಡ್ಡ ಅಕ್ಷರಗಳಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಭಿಕ್ಷುಕರ ಅಭಿವೃದ್ಧಿಗಾಗಿ ಸ್ಟಾರ್ಟಪ್ ಸ್ಥಾಪಿಸಿದ ಮಾಜಿ ಪತ್ರಕರ್ತ