ಸಿವಾನ್ (ಬಿಹಾರ) : ಪವಿತ್ರ ಮಾಸ ಸಾವನ್ (ಸಾವನ್ ಪೂಜೆ 2022) ನಡೆಯುತ್ತಿದ್ದು, ಇಂದು ಸಾವನ್ನ ಮೊದಲ ಸೋಮವಾರ ದುರ್ಘಟನೆ ನಡೆದಿದೆ. ಮಹೇಂದ್ರನಾಥ ದೇವಾಲಯದಲ್ಲಿ ನಡೆದ ಶಿವನ ಜಲಾಭಿಷೇಕಕ್ಕೆ ಅಪಾರ ಭಕ್ತ ಸಮೂಹ ನೆರೆದಿತ್ತು. ಈ ವೇಳೆ ದೇವಸ್ಥಾನದಲ್ಲಿ ನೀರು ಹರಿಸುವ ವೇಳೆ ಕಾಲ್ತುಳಿತ ಉಂಟಾಗಿ 3 ಮಂದಿ ಸಾವಿಗೀಡಾಗಿದ್ದಾರೆ.
ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಎಂದು ತಿಳಿದುಬಂದಿದೆ. ಮತ್ತೊಬ್ಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಸಾಕಷ್ಟು ಗೊಂದಲ ಉಂಟಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಒಂದಿಂಚೂ ಜಾಗವಿಲ್ಲದಷ್ಟು ಜನಸಂದಣಿ: ಮಹೇಂದ್ರನಾಥ ದೇಗುಲದಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ನೆರೆದಿತ್ತು. ದೇವಸ್ಥಾನದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜನರು ಒಬ್ಬರ ಮೇಲೆ ಒಬ್ಬರು ಬೀಳಲು ಪ್ರಾರಂಭಿಸಿದ್ದರು. ಜಲ ಅರ್ಪಿಸುವ ವೇಳೆ ನೂಕುನುಗ್ಗಲು ಉಂಟಾಗಿ ಮೂವರು ಮಹಿಳೆಯರು ಗಾಯಗೊಂಡಿದ್ದರು. ಮೂವರನ್ನೂ ಸಿವಾನ್ ಸದರ್ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕಾಲ್ತುಳಿತದ ವೇಳೆ ಮತ್ತೊಬ್ಬರು ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರು ಉತ್ತರಪ್ರದೇಶದ ಡಿಯೋರಿಯಾ ನಿವಾಸಿ ಎಂದು ಹೇಳಲಾಗಿದೆ. ಇದೇ ಸಮಯದಲ್ಲಿ, ಮೃತ ಮಹಿಳೆಯರನ್ನು ಹುಸೈನಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪುರ್ ನಿವಾಸಿ ಮೋತಾಬ್ ಚೌಧರಿ ಅವರ ಪತ್ನಿ ಲೀಲಾವತಿ ದೇವಿ ಮತ್ತು ಜಿರಾಡೆ ಪೊಲೀಸ್ ಠಾಣೆ ವ್ಯಾಪ್ತಿಯ ಪಥರ್ ಗ್ರಾಮದ ನಿವಾಸಿ ಸುಹಾಗ್ಮತಿ ದೇವಿ ಎಂದು ಗುರುತಿಸಲಾಗಿದೆ.
ಗೇಟ್ ತೆರೆದ ತಕ್ಷಣ ಜಮಾಯಿಸಿದ ಗುಂಪು: ಗಾಯಾಳು ಶಿವಕುಮಾರಿಯ ಪತಿ ಜನಕ್ ದೇವ್ ಭಗಸತ್ ಮಾತನಾಡಿ, ಬೆಳಗಿನ ಜಾವ ಮೂರು ಗಂಟೆಗೆ ಗೇಟ್ ತೆರೆಯುವ ವೇಳೆ ದೇವಸ್ಥಾನದಲ್ಲಿ ಜನಸಾಗರವೇ ನೆರೆದಿತ್ತು. ಇದರಲ್ಲಿ ಶಿವನಿಗೆ ಜಲ ಅರ್ಪಿಸುವ ವೇಳೆ ನೂಕುನುಗ್ಗಲು ಉಂಟಾಯಿತು. ಅದೇ ಸಮಯದಲ್ಲಿ, ಗೇಟ್ ಬಳಿ ಎಲ್ಲರೂ ಒಮ್ಮೆಲೆ ಬಂದ ಕಾರಣ ಕಾರಣ ಲೀಲಾವತಿ ದೇವಿ ಮತ್ತು ಸುಹಾಗ್ಮತಿ ದೇವಿ ಸಾವಿಗೀಡಾಗಿದ್ದಾರೆ. ಇಲ್ಲಿ ಆಡಳಿತದಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಹಲವು ಜನರಿಗೆ ತೀವ್ರ ಗಾಯ: ಇಲ್ಲಿ ಹಲವರಿಗೆ ತೀವ್ರಗಾಯವಾಗಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಸಹ ಇಲ್ಲ. ಮಾಹಿತಿ ನೀಡಿದ ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ ಎಂದು ಭಕ್ತ ಸತೀಶ್ ಶರ್ಮಾ ಎಂಬುವರು ತಿಳಿಸಿದ್ದಾರೆ.
ಆಡಳಿತ ಮಂಡಳಿ ವಿರುದ್ಧ ಜನಾಕ್ರೋಶ: ಘಟನೆಯ ಬಗ್ಗೆ ಮಾಹಿತಿ ಪಡೆದ ಸಿವಾನ್ ಠಾಣೆ ಹಾಗೂ ಚೈನ್ಪುರ ಮಹದೇವ ಒಪಿ ಪೊಲೀಸರು ದೇವಸ್ಥಾನಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಜನರನ್ನು ಸಮಾಧಾನಪಡಿಸಿದರು. ಸದ್ಯ ದೇವಸ್ಥಾನದಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದರೆ, ಆಡಳಿತ ವ್ಯವಸ್ಥೆ ಮೇಲೆ ಜನರ ಆಕ್ರೋಶ ಹೆಚ್ಚಾಗಿದೆ. ಇಷ್ಟು ದೊಡ್ಡ ಸಮಾರಂಭದಲ್ಲಿ ಆಡಳಿತ ಮಂಡಳಿಯಿಂದ ಯಾವುದೇ ಬಿಗಿ ಭದ್ರತೆಯನ್ನು ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ: ನೋಡ ನೋಡುತ್ತಲೇ ಬೆಳೆ ಸ್ವಾಹ.. ಬಸವನ ಹುಳು ಕಾಟಕ್ಕೆ ಬೆಚ್ಚಿದ ಕಲಬುರಗಿ ರೈತರು