ನವದೆಹಲಿ: ದೆಹಲಿಯ ಆಡಳಿತಗಾರರ ಮುಂದೆ ನಮ್ಮ ಪಕ್ಷವು ಎಂದಿಗೂ ಶರಣಾಗುವುದಿಲ್ಲ. ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಿಕೊಳ್ಳಲು ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಕರೆ ನೀಡಿದ್ದಾರೆ.
ನವದೆಹಲಿಯ ತಾಕತ್ತೂರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎನ್ಸಿಪಿಯ ಎಂಟನೇ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ, ರೈತರ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹೆಚ್ಚಿಸುವ ಕ್ರಮದ ಬಗ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ: 'ನಿತೀಶ್ ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ' ಎಂದು ಗುಣಗಾನ
ದೆಹಲಿಯ ಆಡಳಿತಗಾರರಿಗೆ ಸವಾಲು ಹಾಕಿದ್ದ ಪೇಶ್ವಾ: ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಹಣ ಬಲದಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈಗಿನ ಸರ್ಕಾರಕ್ಕೆ ನಾವು ಪ್ರಜಾಸತ್ತಾತ್ಮಕವಾಗಿ ಸವಾಲು ಹಾಕಬೇಕಾಗಿದೆ. ನಾವು ಹೋರಾಟಕ್ಕೆ ಸಿದ್ಧರಾಗಿರಬೇಕೆಂದು ರಾಜ್ಯಸಭಾ ಸದಸ್ಯರಾದ 81 ವರ್ಷದ ನಾಯಕ, ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಅಲ್ಲದೇ, ಸಮಾವೇಶ ನಡೆದ ಸ್ಥಳವಾದ ತಾಕತ್ತೂರ ಒಳಾಂಗಣ ಕ್ರೀಡಾಂಗಣ ಮಹತ್ವವನ್ನು ಒತ್ತಿ ಹೇಳಿದ ಪವಾರ್, ಇದೇ ಸ್ಥಳದಲ್ಲಿಯೇ ಬಾಜಿರಾವ್ ಪೇಶ್ವಾ 1737ರಲ್ಲಿ ತನ್ನ ಸೈನ್ಯದೊಂದಿಗೆ ಬೀಡುಬಿಟ್ಟಿದ್ದ ಮತ್ತು ದೆಹಲಿಯ ಆಡಳಿತಗಾರರಿಗೆ ಸವಾಲು ಹಾಕಿದ್ದ ಎಂದು ಎನ್ನುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
ಇದನ್ನೂ ಓದಿ: ಶರದ್ ಪವಾರ್ಗೆ ಬಂತು 'ಪ್ರೇಮ ಪತ್ರ': 'ಇಡಿ' ಅಂದ್ರೆ ಜೋಕ್ ಎಂದ ಎನ್ಸಿಪಿ ಮುಖ್ಯಸ್ಥ
ಜೊತೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾರ್ಯತಂತ್ರ ರೂಪಿಸಲು ಮತ್ತು ಜನಸಾಮಾನ್ಯರ ಮೇಲೆ ಪರಿಣಾಮ ಬೀರಿರುವ ಸಮಸ್ಯೆಗಳ ಬಗ್ಗೆ ಜಂಟಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೆಲಸ ಮಾಡಬೇಕಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಶರದ್ ಪವಾರ್ ಹೇಳಿದರು.
ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ: ಸಮಾವೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್, ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಬಲ ಪಾತ್ರ ವಹಿಸುವಲ್ಲಿ ಶರದ್ ಪವಾರ್ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ಇದೇ ವೇಳೆ ಶರದ್ ಪವಾರ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂಬ ವದಂತಿಗಳನ್ನು ಪ್ರಫುಲ್ ಪಟೇಲ್ ತಳ್ಳಿಹಾಕಿದರು.
ಪವಾರ್ ಸಾಬ್ ಎಂದಿಗೂ ಪ್ರಧಾನಿ ಹುದ್ದೆಯ ಹಕ್ಕುದಾರರಲ್ಲ. ವಾಸ್ತವದಲ್ಲಿ ಇತರರಿಗೆ ಹೋಲಿಸಿದರೆ ನಮ್ಮ ಪಕ್ಷ ಚಿಕ್ಕದಾಗಿರಬಹುದು. ಆದರೆ, ನಮ್ಮ ಪಕ್ಷದ ಜನಪ್ರಿಯತೆಗಿಂತ ನಮ್ಮ ನಾಯಕ ಶರದ್ ಪವಾರ್ ಅವರಿಗೆ ದೇಶಾದ್ಯಂತ ಗೌರವವಿದೆ. ಅವರು ಯಾವಾಗಲೂ ರಚನಾತ್ಮಕ ರಾಜಕೀಯವನ್ನು ಅನುಸರಿಸುತ್ತಾರೆ ಎಂದು ಎಂದು ಪ್ರಫುಲ್ ಪಟೇಲ್ ತಿಳಿಸಿದರು.
ಇದನ್ನೂ ಓದಿ: ಈಟಿವಿ ಭಾರತ Exclusive: ವಿವಾದಗಳು ಅಂತ್ಯ.. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸೆ.22ರಂದು ಅಧಿಸೂಚನೆ ಪಕ್ಕಾ