ವರಂಗಲ್(ತೆಲಂಗಾಣ): ಆಧುನಿಕ ಶೈಲಿಗೆ ಒಗ್ಗಿಕೊಂಡಿರುವ ನಾವು ನಮ್ಮ ಮುಂದಿನ ಆರೋಗ್ಯಕರ ಜೀವನದ ಬಗ್ಗೆ ಮರೆತು ಬಿಟ್ಟಿದ್ದೇವೆ. ಹಣ ಸಂಪಾದನೆಯೊಂದೇ ಬಹುತೇಕರ ಗುರಿ. ಹಾಗಾಗಿ ಹೆಚ್ಚಿನವರು ತಮ್ಮ ಆರೋಗ್ಯ ನಿರ್ಲಕ್ಷಿಸುತ್ತ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಯುವಕರಿಗೆ ಅಥವಾ ಮಧ್ಯವಯಸ್ಕರಿಗೆ ಹೆಚ್ಚು ದೈಹಿಕ ಶ್ರಮ ಹಾಕಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ, ಈ ಇಬ್ಬರು ವೃದ್ಧರು ಮಾತ್ರ ಯಾರಿಗಿಂತಲೂ ಕಡಿಮೆಯಿಲ್ಲ ನೋಡಿ. ಯುವಕರಂತೆ ಚುರುಕು, ಆರೋಗ್ಯವೂ ಸೂಪರ್. ಹೌದು, ಮಂಗಳವಾರದಂದು ಹನುಮಕೊಂಡದಲ್ಲಿ ಆರಂಭವಾದ ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಇಬ್ಬರು ವಯೋವೃದ್ಧರು ಭಾಗಿಯಾಗಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಜೊತೆಗೆ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವರಂಗಲ್ ಜಿಲ್ಲೆಯ ಗೀಸುಕೊಂಡದಿಂದ ಬಂದ ಶ್ರೀನಿವಾಸ್ ರೆಡ್ಡಿ ಲಾಂಗ್ ಜಂಪ್ ಮತ್ತು ಶಾಟ್ಪುಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. 90 ವರ್ಷದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಖಿಲಾ ವಾರಂಗಲ್ನ 95 ವರ್ಷದ ಕೊಮುರಯ್ಯ ಅವರು 5 ಕಿಲೋ ಮೀಟರ್ ಓಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ವ್ಯಾಯಾಮ, ನಿಯಮಿತ ನಡಿಗೆಯು ನಾವು ಫಿಟ್ ಆಗಿ ಇರುವಂತೆ ಮಾಡಿದೆ ಎಂದು ಈ ಇಬ್ಬರು ತಿಳಿಸಿದರು.
ಇದನ್ನೂ ಓದಿ: ಪ್ರಧಾನಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮಕ್ಕೆ ಚಾಮರಾಜನಗರ ವಿದ್ಯಾರ್ಥಿನಿ ಆಯ್ಕೆ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವ ಶ್ರೀನಿವಾಸ್ ಗೌಡ ಅವರು ಶ್ರೀನಿವಾಸ್ ರೆಡ್ಡಿ ಮತ್ತು ಕೊಮುರಯ್ಯ ಅವರನ್ನು ಅಭಿನಂದಿಸಿದರು. ಜೊತೆಗೆ ಪ್ರತಿಯೊಬ್ಬರು ಇವರಿಬ್ಬರಿಂದ ಸ್ಪೂರ್ತಿ ಪಡೆಯಬೇಕು ಎಂದರು. ಹನುಮಕೊಂಡದಲ್ಲಿ ನಡೆಯುತ್ತಿರುವ ಎರಡು ದಿನಗಳ ಚಾಂಪಿಯನ್ಶಿಪ್ನಲ್ಲಿ ಹಲವು ಜಿಲ್ಲೆಗಳ ಕ್ರೀಡಾ ಪಟುಗಳು ಭಾಗವಹಿಸಿದ್ದಾರೆ.