ಮಧುರೈ (ತಮಿಳುನಾಡು): ಕುದಿಯುತ್ತಿದ್ದ ಬಿಸಿ ಗಂಜಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮಧುರೈನ ಪಳಂಗನಂತಂ ಪ್ರದೇಶದಲ್ಲಿರುವ ಪ್ರಸಿದ್ಧ ಮುತ್ತುಮಾರಿಯಮ್ಮನ್ ದೇವಸ್ಥಾನದಲ್ಲಿ ನಡೆಯಿತು. ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಿಂಗಳ ಕೊನೆಯ ಶುಕ್ರವಾರದಂದು ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಇಲ್ಲಿ ಭಕ್ತರಿಗಾಗಿ ವಿಶೇಷ ಅಡುಗೆ ಮಾಡಿ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅದೇ ರೀತಿ ಶುಕ್ರವಾರ ಪೂಜೆಯ ನಂತರ ಮುರುಗನ್ ಮತ್ತು ಇತರೆ ಕೆಲವು ಭಕ್ತರು ಸೇರಿ 6ಕ್ಕೂ ಹೆಚ್ಚು ದೊಡ್ಡ ಪಾತ್ರೆಗಳಲ್ಲಿ ಗಂಜಿ ಬೇಯಿಸುವ ಕಾಯಕದಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಮೂರ್ಛೆ ಹೋದ ಮುತ್ತುಕುಮಾರ್ ಕುದಿಯುವ ಪಾತ್ರೆಯೊಳಗೆ ಬಿದ್ದಿದ್ದಾನೆ. ಆತನ ಕಿರುಚಾಟ ಕೇಳಿದ ತಕ್ಷಣ ಮೇಲೆತ್ತಲು ಜನರು ಹರಸಾಹಸಪಟ್ಟಿದ್ದಾರೆ. ಆದರೆ, ಅಷ್ಟರೊಳಗೆ ಬಿಸಿ ಗಂಜಿಯಿಂದ ಮುತ್ತುಕುಮಾರ್ನ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು.

ಗಾಯಾಳುವನ್ನು ತಕ್ಷಣ ಆ್ಯಂಬುಲೆನ್ಸ್ ಮೂಲಕ ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುತ್ತುಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.