ಲಕ್ನೋ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇಂದು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದೆ. ರಾಜ್ಯ ವಿಧಾನ ಸಭೆಯಲ್ಲಿ ಮಂಡನೆಯಾಗಲಿರುವ ಈ ಬಜೆಟ್ ಅತಿ ದೊಡ್ಡ ಬಜೆಟ್ ಆಗಿರಲಿದೆ. ಇನ್ನು ಬಜೆಟ್ ಕುರಿತು ಮಾತನಾಡಿರುವ ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ, ಬಜೆಟ್ನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ, ಆರೋಗ್ಯ ವಲಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದಿದ್ದಾರೆ.
ಎರಡನೇ ಅವಧಿಗೆ ಸರ್ಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಬಜೆಟ್ ಇದಾಗಿದೆ. ಈ ಬಜೆಟ್ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಬಜೆಟ್ ಜನರ ನಿರೀಕ್ಷೆಗಳ ಬಗ್ಗೆ ಗಮನ ಹರಿಸಲಿದ್ದು, ಎಲ್ಲರ ಅಭಿವೃದ್ದಿಗೆ ಒತ್ತು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಈಗಾಗಲೇ ಚುನಾವಣೆ ವೇಳೆ ಪಕ್ಷ ಹೊರಡಿಸಿದ್ದ ಸಂಕಲ್ಪ ಪತ್ರದಂತೆ ರೈತರು, ಮಹಿಳೆಯರು ಮತ್ತು ಯುವ ಜನರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಬಜೆಟ್ ಗಾತ್ರ: ಮೂಲಗಳ ಪ್ರಕಾರ, ಬಜೆಟ್ ಗಾತ್ರವನ್ನು ಈ ಬಾರಿ ಶೇ 8-10ರಷ್ಟು ಹೆಚ್ಚಿಸಲಾಗಿದೆ. ಬಜೆಟ್ ಮೊತ್ತ 7 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿದೆ. ಕಳೆದ ಬಜೆಟ್ಗೆ ಹೋಲಿಸಿದಾಗ 50 ಸಾವಿರ ಕೋಟಿ ಹೆಚ್ಚಿರಲಿದೆ. ಕಳೆದ ಬಾರಿಯ ಬಜೆಟ್ ಗಾತ್ರ 6. 48 ಲಕ್ಷ ಕೋಟಿ ಇತ್ತು.
ಮೂಲಸೌಲಭ್ಯಗಳಿಗೆ ಒತ್ತು: ಈ ಬಾರಿ ಬಜೆಟ್ನಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ಐಟಿ ಮತ್ತು ಆರೋಗ್ಯ, ಶಿಕ್ಷಣ ವಲಯಕ್ಕೆ ಹೆಚ್ಚಿನ ಪ್ರಾತಿನಿತ್ಯ ನೀಡಿದ್ದು, ಮಹಿಳೆಯರು, ಯುವಜನತೆ ಮತ್ತು ಬಡವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಜಾಗತಿಕ ಹೂಡಿಕೆದಾರರ ಶೃಂಗಸಭೆ 33.5 ಲಕ್ಷ ಕೋಟಿ ಮೌಲ್ಯದ ಹೂಡಿಕೆಯ ಭರವಸೆಗಳನ್ನು ಪಡೆಯಲಾಗಿದೆ. ಹೂಡಿಕೆ ಪ್ರಸ್ತಾಪಗಳನ್ನು ಅಳವಡಿಸುವುದರ ಜೊತೆಗೆ ಎನ್ಸಿಆರ್ ಪ್ರದೇಶವನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಗಮನ ಹರಿಸಲಿದೆ.
ಇದರ ಹೊರತಾಗಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯತೆಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಅಯೋದ್ಯ, ಮಥುರಾ, ಕಾಶಿ, ಮುಜಾಫರ್ನಗರ್, ನೈಮಿಶರಣ್ಯಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರಮುಖ ಅಂಶವಾಗಿದ್ದು, ಈ ಹಿನ್ನಲೆ ರಾಜ್ಯ ಗೃಹ ಇಲಾಖೆಗೆ ಹೆಚ್ಚಿನ ಅನುದಾನ ಸಿಗಲಿದೆ. ಕಳೆದ ಆರು ವರ್ಷಗಳಿಂದ ಈ ಕ್ಷೇತ್ರ ಅಭಿವೃದ್ಧಿಗೆ ದ್ವಿಗುಣ ಹಣವನ್ನು ಮೀಸಲಿಡಲಾಗುತ್ತಿದೆ.
ಅತಿದೊಡ್ಡ ಆರ್ಥಿಕತೆ ಗುರಿ: ಮುಂದಿನ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶ ಒಂದು ಟ್ರಿಲಿಯನ್ ಡಾಲರ್ಗಳೊಂದಿಗೆ ದೇಶದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಆರ್ಥಿಕತೆಯ ಪ್ರಸ್ತುತ ವಿತ್ತೀಯ ಗಾತ್ರವು ಸುಮಾರು 20.48 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಇನ್ನು ಬಜೆಟ್ ಕುರಿತು ಮಂಡಳವಾರ ಮಾತನಾಡಿರುವ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಬಜೆಟ್ ಜನರ ನಿರೀಕ್ಷೆ ಮೀರಿ ಇರಲಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರ ಇದೆ. ಉತ್ತರ ಪ್ರದೇಶದ ಜನರು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಬಜೆಟ್ ಇರಲಿದೆ. ಕೇಂದ್ರ ಬಜೆಟ್ ನಂತರ ವಿರೋಧ ಪಕ್ಷಗಳು ಹೇಗೆ ಗೊಂದಲಕ್ಕೀಡಾಗಿದ್ದವು, ರಾಜ್ಯ ಬಜೆಟ್ ಮಂಡನೆ ನಂತರ ಅದೇ ರೀತಿ ರಾಜ್ಯ ಬಜೆಟ್ನಲ್ಲೂ ಆಗಲಿದೆ ಎಂದಿದ್ದಾರೆ.'
ಇದನ್ನೂ ಓದಿ: ಇಂದು ದೆಹಲಿ ಪಾಲಿಕೆ ಮೇಯರ್ ಚುನಾವಣೆ: ಚುನಾವಣೆ ಮುಗಿಸಲು ಸುಪ್ರೀಂ ಸೂಚನೆ