ನವದೆಹಲಿ: ನಗರದ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ಇಂದು ಆರನೇ ಬಾರಿಗೆ ಮಾತುಕತೆ ಅಂತ್ಯಗೊಂಡಿದ್ದು, ಮುಂದಿನ ಸಭೆಯನ್ನು ಜನವರಿ 4ಕ್ಕೆ ಮುಂದೂಡಲಾಗಿದೆ.
ಮಧ್ಯಾಹ್ನದಿಂದ ಆರಂಭಗೊಂಡಿದ್ದ ಸಭೆ ಸುದೀರ್ಘವಾಗಿ ನಡೆದು, ಹತ್ತು ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಇಂದು 4 ಪ್ರಮುಖ ಬೇಡಿಕೆಗಳಲ್ಲಿ 2ಕ್ಕೆ ಉಭಯ ಕಡೆಗಳಿಂದಲೂ ಒಮ್ಮತದಿಂದ ಒಪ್ಪಿಕೊಂಡಿದ್ದು, ಸಕಾರಾತ್ಮಕ ಅಂಶದೊಂದಿಗೆ ಸಭೆ ಅಂತ್ಯವಾಗಿದೆ ಎಂದು ಸಭೆಯ ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ದೆಹಲಿಯ ಚಳಿಯ ವಾತಾವರಣವನ್ನು ಪರಿಗಣಿಸಿ, ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಮನೆಗೆ ಕಳುಹಿಸುವಂತೆ ರೈತ ಮುಖಂಡರಿಗೆ ಮನವಿ ಮಾಡಿದ್ದೇನೆ. ಮುಂದಿನ ಸುತ್ತಿನ ಮಾತುಕತೆ ಜನವರಿ 4 ರಂದು ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಪರಿಸರದ ಕುರಿತಾದ ಸುಗ್ರೀವಾಜ್ಞೆ ವಿಚಾರದಲ್ಲಿ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಕೊನೆಗೆ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆಯಿಂದ ರೈತರನ್ನ ಹೊರಗಿಡುವ ಬಗ್ಗೆ ಒಪ್ಪಿಕೊಂಡಿದೆ ಎಂದರು.
ವಿದ್ಯುತ್ ಕಾಯ್ದೆಯಲ್ಲಿ ಸುಧಾರಣೆಯನ್ನು ಜಾರಿಗೊಳಿಸಿದರೆ, ಅವರು ನಷ್ಟ ಅನುಭವಿಸುತ್ತಾರೆ ಎಂದು ರೈತರು ಭಾವಿಸುತ್ತಾರೆ. ನೀರಾವರಿಗಾಗಿ ರಾಜ್ಯಗಳು ರೈತರಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಮುಂದುವರಿಸಬೇಕೆಂದು ಸಂಘಟನೆಗಳು ಬಯಸಿದ್ದವು. ಈ ವಿಷಯದ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಅವರ 4 ಬೇಡಿಕೆಗಳಲ್ಲಿ ಇಂದು 2ಕ್ಕೆ ಸಹಮತ ನೀಡಲಾಗಿದೆ. ಆದರೆ ರೈತರು ಮೂರು ಕೃಷಿ ಬಿಲ್ ಹಿಂಪಡೆಯುವಂತೆಯೇ ಮನವಿ ಮಾಡಿದ್ದಾರೆ ಎಂದರು.
ಎಂಎಸ್ಪಿ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದನ್ನು ಲಿಖಿತವಾಗಿ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಎಂಎಸ್ಪಿಗೆ ಕಾನೂನು ಸ್ಥಾನಮಾನ ಸಿಗಬೇಕು ಎಂದು ರೈತ ಸಂಘಗಳು ಅಭಿಪ್ರಾಯಪಟ್ಟಿದೆ. ಆದ್ದರಿಂದ ಜನವರಿ 4 ರಂದು ಮಧ್ಯಾಹ್ನ 2 ಗಂಟೆಗೆ ಎಂಎಸ್ಪಿ ಮತ್ತು ಇತರ ವಿಷಯಗಳ ಕುರಿತು ಚರ್ಚೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬಳಿಕ ಈ ಕುರಿತು ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ, ರಾಕೇಶ್ ಟಿಕೈಟ್, ಇಂದಿನ ಸಭೆಯಲ್ಲಿ ಕೃಷಿ ಜಮೀನಿನ ಕಸಕ್ಕೆ ಬೆಂಕಿ ಹಾಕಿ ಸುಡುವಿಕೆ ಮತ್ತು ವಿದ್ಯುತ್ಗೆ ಸಂಬಂಧಿಸಿದ ವಿಷಯಗಳು ಒಮ್ಮತ ನಿರ್ಧಾರ ಕಂಡಿವೆ. ನಮ್ಮ 2 ಮುಖ್ಯ ಸಮಸ್ಯೆಗಳನ್ನು ಇನ್ನೂ ಪರಿಹರಿಸಬೇಕಾಗಿದೆ. ಮುಂದಿನ ಜನವರಿ 4 ರಂದು ಎಂಎಸ್ಪಿ ಮತ್ತು 3 ಕೃಷಿ ಕಾನೂನುಗಳನ್ನು ರದ್ದುಪಡಿಸುವುದಕ್ಕೆ ಸಂಬಂಧಿಸಿದ ವಿಷಯಗಳನ್ನು ನಾವು ಚರ್ಚಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಅಪಪ್ರಚಾರವನ್ನು ನಂಬಬೇಡಿ ; ರೈತರಿಗೆ ಕೃಷಿ ಸಚಿವ ತೋಮರ್ 8 ಪುಟಗಳ ಪತ್ರ