ನವದೆಹಲಿ : ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ, ತೆಲಂಗಾಣ ಸರ್ಕಾರ ಇಂದು ಸುಪ್ರೀಂಕೋರ್ಟ್ ನೇಮಿತ ಸಮಿತಿಯ ಮುಂದೆ ಪುರಾವೆಗಳನ್ನು ಹಾಜರುಪಡಿಸಲಿದೆ.
ಈ ಹಿಂದೆ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ ತನ್ನ ಸಾಕ್ಷ್ಯವನ್ನು ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ತಿಳಿಸಿ, ನ್ಯಾಯಮೂರ್ತಿ ವಿ ಎಸ್ ಸಿರ್ಪುಕರ್ ನೇತೃತ್ವದ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು.
ಹಿನ್ನೆಲೆ : 2019ರ ನವೆಂಬರ್ನಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಈ ಕೇಸ್ ಜನರಲ್ಲಿ ಭಯದ ಜತೆಗೆ ಆಕ್ರೋಶ ಹುಟ್ಟಿಸಿತ್ತು. ಪ್ರಕರಣದ ಆರೋಪಿಗಳನ್ನು ಡಿ.6ರಂದು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಎನ್ಕೌಂಟರ್ ಮಾಡಿದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಈ ಎನ್ಕೌಂಟರ್ ಕಾನೂನು ಬಾಹಿರ ಎಂದೂ ಹೇಳಲಾಗಿತ್ತು. ಎನ್ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿಯನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ, ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್ ಆಯೋಗ ಸೂಚನೆ ನೀಡಿದೆ.