ಚಂಡೀಗಢ: ಬಿಜೆಪಿ ನಾಯಕ ತಜಿಂದರ್ ಬಗ್ಗಾ ಬಂಧನ ಪ್ರಕರಣದ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆದಿದೆ. ಪಂಜಾಬ್ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ನಡೆದಿದೆ. ವಿಚಾರಣೆಯ ಸಂದರ್ಭದಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೂರು ಕಕ್ಷಿದಾರರಿಂದ (ದೆಹಲಿ, ಹರಿಯಾಣ ಮತ್ತು ಪಂಜಾಬ್ ಪೊಲೀಸ್) ಸಂಪೂರ್ಣ ಮಾಹಿತಿಯನ್ನು ಕೇಳಿದೆ. ದೆಹಲಿ ಪೊಲೀಸರ ಪರವಾಗಿ, ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಅವರು ತಜಿಂದರ್ಪಾಲ್ ಬಗ್ಗಾ ಅವರ ತಂದೆ ಶುಕ್ರವಾರ ಬೆಳಗ್ಗೆ ಜನಕ್ಪುರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆ ಪ್ರಕರಣ ರಿಜಿಸ್ಟರ್ ಆಗಿದೆ ಎಂದರು.
ಸರ್ಚ್ ವಾರಂಟ್ಗಳನ್ನು ದೆಹಲಿ ಪೊಲೀಸರು ಹರಿಯಾಣ ಪೊಲೀಸರು ಸೇರಿದಂತೆ ಇತರ ರಾಜ್ಯಗಳಿಗೆ ಕಳುಹಿಸಿದ್ದರು. ಅದರ ನಂತರ ಹರಿಯಾಣ ಪೊಲೀಸರು ಕುರುಕ್ಷೇತ್ರದ ಬಳಿ ಸರ್ಚ್ ವಾರೆಂಟ್ ಅನ್ನು ಜಾರಿಗೊಳಿಸಿದರು. ಪಂಜಾಬ್ ಪೊಲೀಸರನ್ನು ತಡೆದು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ದೆಹಲಿ ಪೊಲೀಸರು ತಜಿಂದರ್ಪಾಲ್ ಬಗ್ಗಾ ಅವರನ್ನು ದೆಹಲಿಗೆ ಕರೆದೊಯ್ದರು. ಈ ವೇಳೆ ದೆಹಲಿ ಪೊಲೀಸರು ಯಾವುದೇ ಪಂಜಾಬ್ ಅಧಿಕಾರಿಯನ್ನು ಬಂಧಿಸಿಲ್ಲ. ಜನಕಪುರಿ ಪೊಲೀಸ್ ಠಾಣೆಯಲ್ಲಿ ಎರಡ್ಮೂರು ಪೊಲೀಸರು ಸ್ವಯಂಪ್ರೇರಣೆಯಿಂದ ಕುಳಿತಿದ್ದಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಸ್ಪಷ್ಟಪಡಿಸಿದ್ದಾರೆ.
ತಜಿಂದರ್ಪಾಲ್ ಸಿಂಗ್ ಬಗ್ಗಾರನ್ನು ಪಂಜಾಬ್ ಪೊಲೀಸರು ಬಂಧಿಸಿರುವ ಕುರಿತು ನಾವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯಕ್ಕೆ ಬಂಧಿಸಲು ಹೋದರೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಬೇಕು. ಅವರ ಒಪ್ಪಿಗೆ ಪಡೆಯಬೇಕು. ಆದರೆ ಪಂಜಾಬ್ ಪೊಲೀಸರು ದೆಹಲಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ತಜಿಂದರ್ ಪಾಲ್ರನ್ನು ಏಕೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರಿಗೆ ಪತ್ತೆ ಹಚ್ಚಲಾಗಲಿಲ್ಲ. ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರಿಂದ ಬಿಜೆಪಿ ನಾಯಕನನ್ನು ಮತ್ತೆ ದೆಹಲಿಗೆ ಪೊಲೀಸ್ ಕಸ್ಟಡಿಗೆ ಕರೆದೊಯ್ಯಲಾಗಿದೆ ಎಂದರು.
ಓದಿ: ಬಿಜೆಪಿ ಮುಖಂಡನ ಬಂಧನ ವಿಚಾರವಾಗಿ ಪಂಜಾಬ್-ಹರಿಯಾಣ ಪೊಲೀಸ್ ಡಿಶುಂ ಡಿಶುಂ
ಪಂಜಾಬ್ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಅಡ್ವೊಕೇಟ್ ಜನರಲ್ ಅನ್ಮೋಲ್ ರತನ್ ಸಿಧು, ತಜಿಂದರ್ಪಾಲ್ ಸಿಂಗ್ ಬಗ್ಗಾ ವಿರುದ್ಧ ಪಂಜಾಬ್ನಲ್ಲಿ ಎಫ್ಐಆರ್ ದಾಖಲಾಗಿದೆ. ಅವರು ಸಮನ್ಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗಿಲ್ಲ ಮತ್ತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಹ ಸಲ್ಲಿಸಿಲ್ಲ. ಈ ಸಂದರ್ಭದಲ್ಲಿ ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅವರು ಕಡೆಗಣಿಸಿದ್ದಾರೆ ಎಂದರು.
ತಜಿಂದರ್ಪಾಲ್ ಬಗ್ಗಾರಿಗೆ ಐದು ಬಾರಿ ನೋಟಿಸ್ ನೀಡಿದ ನಂತರವೂ ಅವರು ಪೊಲೀಸರ ಮುಂದೆ ಹಾಜರಾಗಲಿಲ್ಲ. ನಂತರ ಪಂಜಾಬ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪಂಜಾಬ್ ಪೊಲೀಸ್ ತಂಡವನ್ನು ಜನಕಪುರಿ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಪಂಜಾಬ್ ಪೊಲೀಸ್ ಅಧಿಕಾರಿಗಳು ಇನ್ನೂ ಜನಕಪುರಿ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ರತನ್ ಸಿಧು ಹೇಳಿದ್ದಾರೆ.
ಪಂಜಾಬ್ ಪೊಲೀಸರು ತಜಿಂದರ್ ಸಿಂಗ್ ಬಗ್ಗಾರನ್ನು ಅತ್ಯಂತ ಸುಲಭವಾಗಿ ಬಂಧಿಸಿದ್ದಾರೆ. ಬಂಧನ ಸಮಯದಲ್ಲಿ ನಾವು ವಿಡಿಯೋಗ್ರಫಿ ಮಾಡಿದ್ದೇವೆ. ಪಂಜಾಬ್ ಪೊಲೀಸರು ಬಿಜೆಪಿ ನಾಯಕನಿಗೆ ಬಲವಂತ ಮಾಡಲಿಲ್ಲ. ಅಲ್ಲಿ ಥಳಿಸಿದ್ದಾರೆ ಎನ್ನಲಾಗಿದೆ. ಹಾಗೇನೂ ಆಗಿಲ್ಲ. ಆದರೆ ಪಂಜಾಬ್ ಪೊಲೀಸರು ಬಗ್ಗಾರನ್ನು ಬಂಧಿಸುತ್ತಿದ್ದಾಗ ದೆಹಲಿ ಪೊಲೀಸರು ಮತ್ತು ಹರಿಯಾಣ ಪೊಲೀಸರು ಕುರುಕ್ಷೇತ್ರದಲ್ಲಿ ಸಿನಿಮಾ ಶೈಲಿಯಲ್ಲಿ ನಿಲ್ಲಿಸಿದರು ಎಂದು ರತನ್ ಸಿಧು ಹೇಳಿದ್ದಾರೆ.
ಹೀಗಾಗಿ ನಮಗೆ ಹೈಕೋರ್ಟಿನ ಮೊರೆ ಹೋಗದೆ ಬೇರೆ ದಾರಿ ಇರಲಿಲ್ಲ. ನಮ್ಮ ಕಾರ್ಯವಿಧಾನದ ಪ್ರಕಾರ ನಾವು ಅವರನ್ನು 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂಬ ಅಂಶವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಮೂರು ರಾಜ್ಯಗಳ ಪೊಲೀಸರು ಶುಕ್ರವಾರ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ.