ನವದೆಹಲಿ: ಸುಪ್ರೀಂ ಕೋರ್ಟ್ನ ಎಲ್ಲ ಸಾಂವಿಧಾನಿಕ ಪೀಠಗಳ ವಿಚಾರಣೆಯು ಸೆ.27 ರಿಂದ ಲೈವ್ ಸ್ಟ್ರೀಮಿಂಗ್ (ನೇರ ಪ್ರಸಾರ) ಆಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿ, ಜಮ್ಮು ಮತ್ತು ಕಾಶ್ಮೀರದ ಕಲಂ 370 ರ ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಮತ್ತು ಆರ್ಥಿಕತೆಯ ಆಧಾರದ ಮೇಲೆ ಮೇಲ್ಜಾತಿಗಳ ಕೋಟಾದಂಥ ಪ್ರಕರಣಗಳ ವಿಚಾರಣೆಯನ್ನು ಇನ್ನು ಮುಂದೆ ಸಾರ್ವಜನಿಕರು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದು.
ಭಾರತದ ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಸುಪ್ರೀಂ ಕೋರ್ಟ್ ಕೈಗೊಂಡ ಪ್ರಮುಖ ನಿರ್ಧಾರವಾಗಿದೆ. ಆದಾಗ್ಯೂ ಆಗಸ್ಟ್ 26 ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರ ನ್ಯಾಯಾಲಯದ ಕಲಾಪವನ್ನು, ಅವರ ಸೇವಾವಧಿಯ ಕೊನೆಯ ದಿನದಂದು ನೇರಪ್ರಸಾರ ಮಾಡಲಾಗಿತ್ತು ಎಂಬುದನ್ನು ಸ್ಮರಿಸಬಹುದು.
ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪೂರ್ಣ ನ್ಯಾಯಾಲಯದ ಸಭೆ ನಡೆದಿತ್ತು. ಆರಂಭದಲ್ಲಿ ಸಾಂವಿಧಾನಿಕ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಬೇಕು ಮತ್ತು ನಂತರ ಇತರ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸಹ ಲೈವ್ ಸ್ಟ್ರೀಮಿಂಗ್ ಮಾಡಲು ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಯಾಧೀಶರು ಸರ್ವಾನುಮತದಿಂದ ನಿರ್ಧರಿಸಿದರು.
ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ನಾಗರಿಕ ಹಕ್ಕುಗಳ ಪ್ರಕಾರ ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಕ್ರಿಯೆಗಳನ್ನು ತೋರಿಸುವ ಪರವಾಗಿ ಸುಪ್ರೀಂ ಕೋರ್ಟ್ 2018 ರಲ್ಲಿಯೇ ತೀರ್ಪು ನೀಡಿತ್ತು. ಆದರೆ ಈ ಆದೇಶ ಕಾರ್ಯಗತಗೊಂಡಿರಲಿಲ್ಲ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯನಿರ್ವಹಿಸಿದ್ದವು. ಇದು ನ್ಯಾಯಾಲಯದ ಕಲಾಪಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಲು ಕಾರಣವಾಯಿತು. ಲಾಕ್ಡೌನ್ ಸಮಯದಲ್ಲಿ ಅನಿವಾರ್ಯವಾಗಿ ಅಳವಡಿಸಿಕೊಂಡಿದ್ದ ಕ್ರಮಗಳು ಈಗ ಹೊಸ ಸಹಜ ಪ್ರಕ್ರಿಯೆಗಳಾಗುತ್ತಿವೆ.
ಇದನ್ನೂ ಓದಿ: ಹೈಕೋರ್ಟ್ ವರ್ಚುವಲ್ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿಯಿಂದ ಕ್ಷಮೆಯಾಚನೆ: ದೂರು ಇತ್ಯರ್ಥ