ನವದೆಹಲಿ: ದೇಶದ್ರೋಹದ ಕಾನೂನು ಪುನರ್ವಿಮರ್ಶೆ ಆಗುವವರೆಗೂ ಈ ಕಾನೂನಿನಡಿ ಯಾವುದೇ ಹೊಸ ಎಫ್ಐಆರ್ಗಳನ್ನು ದಾಖಲಿಸದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ಸಿಜೆಐ ರಮಣ ಅವರಿದ್ದ ನ್ಯಾಯಪೀಠ, 'ಈ ಕಾನೂನಿನ ಪುನರ್ವಿಮರ್ಶೆ ಆಗುವವರೆಗೂ ನಾವು ಹೊಸ ಪ್ರಕರಣಗಳು ದಾಖಲಾಗುವುದನ್ನು ನಿರೀಕ್ಷಿಸುವುದಿಲ್ಲ' ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೇಳಿದರು.
ಈ ಕುರಿತು ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್, ಈಗಾಗಲೇ ಐಪಿಸಿ ಸೆಕ್ಷನ್ 124 ಎ ಅಡಿ ಕೇಸು ಹೊಂದಿದ್ದು ಮತ್ತು ಜೈಲಿನಲ್ಲಿರುವ ಆರೋಪಿಗಳು ಸಂಬಂಧಿಸಿದ ನ್ಯಾಯಾಲಯಗಳ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದು' ಎಂದು ಸಲಹೆ ನೀಡಿದೆ.
ಸಾಲಿಸಿಟರ್ ಜನರಲ್ ಹೇಳಿದ್ದೇನು? ಇದಕ್ಕೂ ಮುನ್ನ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ದೇಶದ್ರೋಹ ಕಾನೂನು ಮರುಪರಿಶೀಲನೆಗೆ ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಪ್ರಕರಣ ದೇಶದ್ರೋಹದ ವ್ಯಾಪ್ತಿಯಲ್ಲಿ ಬರುವ ಬಗ್ಗೆ ಎಸ್ಪಿ ದರ್ಜೆಯ ಅಧಿಕಾರಿ ಖಾತ್ರಿಪಡಿಸಿದ ನಂತರವೇ ಎಫ್ಐಆರ್ ದಾಖಲಾಗುತ್ತದೆ' ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.
ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ದಾಖಲಾಗಿರುವ ದೇಶದ್ರೋಹದ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯುವುದು, ವಸಾಹತುಶಾಹಿ ಕಾಲದಿಂದ ಅಸ್ತಿತ್ವದಲ್ಲಿರುವ ದೇಶದ್ರೋಹ ಕಾನೂನನ್ನು ಸರ್ಕಾರ ಮರುಪರಿಶೀಲನೆಗೆ ಒಳಪಡಿಸುವವರೆಗೆ ಹೊಸ ಪ್ರಕರಣಗಳನ್ನು ದಾಖಲಿಸದಿರುವ ಕುರಿತು ಮುಂದಿನ 24 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಮಂಗಳವಾರ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಎಸ್ಪಿ ದರ್ಜೆ ಅಧಿಕಾರಿಯಿಂದ 'ದೇಶದ್ರೋಹ' ಪ್ರಕರಣಗಳ ಮೇಲ್ವಿಚಾರಣೆ : ಸುಪ್ರೀಂಗೆ ಕೇಂದ್ರ ಮಾಹಿತಿ