ನವದೆಹಲಿ: ಉತ್ತರಪ್ರದೇಶದಲ್ಲಿ ಅಕ್ರಮ ಮನೆಗಳ ಮೇಲೆ ಸದ್ದು ಮಾಡುತ್ತಿರುವ ಬುಲ್ಡೋಜರ್ ಕಾರ್ಯಾಚರಣೆಯನ್ನು ತಡೆಯಲು ಮಧ್ಯಂತರ ಆದೇಶ ನೀಡಬಹುದೇ ಎಂದು ಸುಪ್ರೀಂಕೋರ್ಟ್ ಪೀಠ ಪ್ರಶ್ನಿಸಿದೆ.
ಮುಸ್ಲಿಂ ಸಮುದಾಯದ ಜನರ ಮನೆಗಳ ಮೇಲೆ ಬುಲ್ಡೋಜರ್ ಬಳಕೆ ಮಾಡಿರುವುದನ್ನು ಖಂಡಿಸಿ ಜಮೀಯತ್ ಉಲಮಾ - ಇ- ಹಿಂದ್ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಿ.ಎಸ್. ನರಸಿಂಹ ಅವರಿದ್ದ ಪೀಠ, ಕಕ್ಷಿದಾರರಿಗೆ ಈ ವಿಷಯದಲ್ಲಿ ಮನವಿಗಳನ್ನು ಪೂರ್ಣಗೊಳಿಸುವಂತೆ ಹೇಳಿದೆ. ಅಲ್ಲದೇ ಜಮೀಯತ್ ಉಲಮಾ ಮನೆ ನೆಲಸಮ ವಿರುದ್ಧ ಸಲ್ಲಿಸಿದ ಮನವಿಯನ್ನು ಆಲಿಸುವುದಾಗಿ ಹೇಳಿದೆ.
ಕಾನೂನಿನಲ್ಲಿರುವ ನಿಯಮವನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಬುಲ್ಡೋಜರ್ ಬದಲಾಗಿ ನಾವು ಓಮ್ನಿ ಬಸ್ ಕ್ರಮಕ್ಕೆ ಆದೇಶವನ್ನು ಹೊರಡಿಸಬಹುದೇ? ಎಂದು ಪೀಠ ಪ್ರಶ್ನಿಸಿತು.
ಭಾರತೀಯತೆಯೇ ಸಮುದಾಯ: ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಮನೆಗಳನ್ನು ಧ್ವಂಸ ಮಾಡಲಾಗಿದೆ. ಇದರ ಜೊತೆ ಬೇರೆ ಸಮುದಾಯದ ಮನೆಗಳನ್ನು ನಾಶ ಮಾಡಿರುವುದು ನಾಮಕೇವಾಸ್ತೆ ಎಂದು ವಾದಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ದೇಶದಲ್ಲಿ ಇರುವುದು ಭಾರತೀಯ ಸಮುದಾಯ ಮಾತ್ರ. ಬೇರೆ ಯಾವುದೇ ಸಮುದಾಯವಿಲ್ಲ. ಅನಾವಶ್ಯಕವಾಗಿ ಸಂವೇದನಾ ರಹಿತ ಹೇಳಿಕೆ ನೀಡದಂತೆ ವಕೀಲರಿಗೆ ತಿಳಿಸಿತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಈ ನಡೆ ಅನುಸರಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗಿದೆ ಎಂದು ವಾದಿಸಿದರು.
ವಿಚಾರಣೆ ಮುಂದೂಡಿಕೆ: ವಾದ ಆಲಿಸಿದ ಪೀಠ, ಕಾನೂನು ನಿಯಮವನ್ನು ಪಾಲಿಸಲು ಯಾವುದೇ ತಕರಾರು ಇಲ್ಲ. ಆದರೆ ಅಕ್ರಮ ಮನೆಗಳನ್ನು ಕೆಡವಲು ಅಧಿಕಾರಿಗಳಿಗೆ ತಡೆಯಾಜ್ಞೆ ನೀಡಬಹುದೇ ಎಂದು ಪ್ರಶ್ನಿಸಿತು.
ಬಳಿಕ ಮುಂದಿನ ವಿಚಾರಣೆಯನ್ನು ಬಳಿಕ ಆಗಸ್ಟ್ 10ಕ್ಕೆ ಮುಂದೂಡಿತು.
ಒದಿ: ಅಗ್ನಿಪಥ್ ಯೋಜನೆ ವಿರುದ್ಧದ ಅರ್ಜಿ ಸುಪ್ರೀಂನಿಂದ ನಾಡಿದ್ದು ವಿಚಾರಣೆ