ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಉಪಕುಲಪತಿಯಾಗಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ರನ್ನು ಶಿಕ್ಷಣ ಸಚಿವಾಲಯ (ಎಂಒಇ) ನೇಮಿಸಿ ಆದೇಶ ಹೊರಡಿಸಿದೆ.
ಪಂಡಿತ್ ಪ್ರಸ್ತುತ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. 59 ವರ್ಷದ ಪಂಡಿತ್ ಅವರು ಜೆಎನ್ಯುನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ. ಅಲ್ಲಿ ಅವರು ತಮ್ಮ ಎಂಫಿಲ್ ಮತ್ತು ಅಂತಾರಾಷ್ಟ್ರೀಯ ಸಂಬಂಧದ ವಿಷಯಗಳಲ್ಲಿ ಪಿಎಚ್ಡಿ ಪಡೆದಿದ್ದಾರೆ.

ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕರಾಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ಜೆಎನ್ಯು ಉಪಕುಲಪತಿಯಾಗಿ ನೇಮಕ ಮಾಡಲು ಅನುಮೋದಿಸಿದ್ದಾರೆ. ಅವರ ನೇಮಕವು ಐದು ವರ್ಷಗಳ ಅವಧಿಗೆ ಇರುತ್ತದೆ ಎಂದು ಹಿರಿಯ MoE ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಚಿಕ್ಕಮಗಳೂರಿನಲ್ಲಿ ಹಿಜಾಬ್ಗೆ ವಿದ್ಯಾರ್ಥಿಗಳು ಬೆಂಬಲ.. ಕೇಸರಿ ವಿರುದ್ಧ ನಿಂತ ನೀಲಿ ಶಾಲಿನ ಹುಡುಗರು!
ಪಂಡಿತ್ 1988ರಲ್ಲಿ ಗೋವಾ ವಿಶ್ವವಿದ್ಯಾನಿಲಯದಿಂದ ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು. 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನವನ್ನು ಹೊಂದಿದ್ದಾರೆ. ಅವರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ.
ಪಂಡಿತ್ರ ವೃತ್ತಿಜೀವನದಲ್ಲಿ, ಅವರು 29 ಪಿಎಚ್ಡಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಐದು ವರ್ಷಗಳ ಅವಧಿ ಮುಗಿದ ನಂತರ ಜೆಎನ್ಯುನಲ್ಲಿ ಹಂಗಾಮಿ ವಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ ಜಗದೇಶ್ ಕುಮಾರ್ ಅವರನ್ನು ಕಳೆದ ವಾರ ಯುಜಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ತೆರುವಾದ ಉನ್ನತ ಹುದ್ದೆಗೆ ಪಂಡಿತ್ರನ್ನು ನೇಮಕ ಮಾಡಲಾಗಿದೆ.