ಕಡಪ (ಆಂಧ್ರ ಪ್ರದೇಶ): ಬಸ್ ನಿಲ್ದಾಣಕ್ಕೆ ಸಂಬಂಧಿಸಿದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಬಸ್ ನಿಲ್ದಾಣವನ್ನು ಕಡಪ ನಗರಸಭೆ ಮುಚ್ಚಿದ್ದು, ಬೆಳಗ್ಗೆಯಿಂದಲೇ ಬಸ್ಗಳು ನಿಲ್ದಾಣದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ.
ಕಡಪ ಹಳೆ ಬಸ್ ನಿಲ್ದಾಣವನ್ನು ಪುರಸಭೆಯಿಂದ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಆರ್ಟಿಸಿ ಬಸ್ಗಳನ್ನು ನಿಲ್ಲಿಸಲು ಆರ್ಟಿಸಿ ಅಧಿಕಾರಿಗಳು ಪ್ರತಿ ತಿಂಗಳು ನಗರಾಡಳಿತಕ್ಕೆ ಬಾಡಿಗೆ ಪಾವತಿಸಬೇಕು. ಆದರೆ, 2013ರಿಂದ ಇದುವರೆಗೆ ಆರ್ಟಿಸಿ ಅಧಿಕಾರಿಗಳು ನಗರಸಭೆಗೆ ಸರಿಯಾಗಿ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಸುಮಾರು 2 ಕೋಟಿ 30 ಲಕ್ಷ ರೂ. ಬಾಡಿಗೆ ಬಾಕಿ ಉಳಿದಿದೆ.
ಈ ಹಿಂದಿನ ಪುರಸಭೆ ಅಧಿಕಾರಿಗಳು ಹಾಗೂ ಆರ್ಟಿಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಕಿ ಹಣ ಹೆಚ್ಚುತ್ತಲೇ ಸಾಗಿದೆ. ಇದೀಗ ಹೊಸದಾಗಿ ಬಂದಿರುವ ಆಯುಕ್ತ ಸೂರ್ಯ ಸಾಯಿ ಪ್ರವೀಣ್, ಬಾಡಿಗೆ ಪಾವತಿಸುವಂತೆ ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ, ಆರ್ಟಿಸಿ ಅಧಿಕಾರಿಗಳು ಸ್ಪಂದಿಸದ ಕಾರಣ ಇಂದು ಮುಂಜಾನೆ 4 ಗಂಟೆಯಿಂದಲೇ ಹಳೆ ಬಸ್ ನಿಲ್ದಾಣದೊಳಗೆ ಬಸ್ ಬಿಡದೇ ಬಂದ್ ಮಾಡಲು ಆದೇಶಿಸಿದ್ದಾರೆ.
ಹೀಗಾಗಿ ಎಲ್ಲ ಬಸ್ಗಳು ನಿಲ್ದಾಣದ ಹೊರಗಡೆಯಿಂದಲೇ ಸಂಚರಿಸುವಂತೆ ಆಗಿದೆ. ಇತ್ತ, ಬಸ್ಗಳಿಗಾಗಿ ರಸ್ತೆಗಳಲ್ಲಿ ನಿಂತು ಪ್ರಯಾಣಿಕರು ಸಹ ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಈ ರೀತಿ ಬಸ್ ನಿಲ್ದಾಣ ಬಂದ್ ಮಾಡುವುದು ಸರಿಯಲ್ಲ. ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇನ್ನು, ಕಡಪ ಮುಖ್ಯಮಂತ್ರಿ ಹಾಗೂ ಆರ್ಟಿಸಿ ಮುಖ್ಯಸ್ಥರ ತವರು ಜಿಲ್ಲೆ ಎಂಬುದು ಗಮನಾರ್ಹ.
ಇದನ್ನೂ ಓದಿ: ವಿದ್ಯಾರ್ಥಿಗಳು-ಹೊರಗಿನವರ ಮಧ್ಯೆ ಮಾರಾಮಾರಿ: ಓರ್ವನಿಗೆ ಡಿಕ್ಕಿ ಹೊಡೆದ ಕಾರು-ವಿಡಿಯೋ