ಬಲರಾಂಪುರ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಶನಿವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪರಿಚಿತ ಟ್ರಕ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಕೆಲ ಮೀಟರ್ಗಳ ದೂರಕ್ಕೆ ಹಾರಿ ಬಿದ್ದಿದ್ದು, ಸಂಪೂರ್ಣ ನಜ್ಜಾಗಿದೆ.
ಕಾರಿನಲ್ಲಿ ಆರು ಮಂದಿ ಪ್ರಯಾಣ: ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಎಲ್ಲರೂ ಒಂದೇ ಕುಟುಂಬದವರೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈ ಕಾರು ಉತ್ರೌಲಾದಿಂದ ಬಲರಾಂಪುರಕ್ಕೆ ಬರುತ್ತಿತ್ತು ಎಂದು ತಿಳಿದುಬಂದಿದೆ. ಶ್ರೀದತ್ತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾಜ್ ಶುಗರ್ ಮಿಲ್ ತಿರುವಿನಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಈ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ - ಪತ್ನಿ ಹಾಗೂ ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ನಿದ್ರೆಗೆ ಜಾರಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.
ಸ್ಥಳಕ್ಕೆ ಪೊಲೀಸರು ದೌಡು..: ಇಂದು ನಸುಕಿನ ಜಾವ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಕಾರಿನಲ್ಲಿದ್ದ ಮೃತದೇಹಗಳನ್ನು ಒಂದೊಂದಾಗಿ ಹೊರತೆಗೆದರು.
ಪೊಲೀಸರ ಪ್ರಕಾರ, ಕಾರಿನಲ್ಲಿದ್ದವರು ನೈನಿತಾಲ್ನಿಂದ ಡಿಯೋರಿಯಾದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದರು. ಈ ಸ್ವಿಫ್ಟ್ ಡಿಜೈರ್ ಕಾರಿನ ನಂಬರ್ ಪ್ಲೇಟ್ UK04 1188 ಆಗಿದೆ. ಕಾರಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ನಲ್ಲಿ ಸೋನು ಸಾಹು ಗ್ರಾಮ ವಂಕುಲ್ ಪೊಲೀಸ್ ಠಾಣೆ ಶ್ರೀರಾಂಪುರ ಜಿಲ್ಲೆ ಡಿಯೋರಿಯಾ ಎಂದು ಬರೆಯಲಾಗಿದೆ ಅಂತಾ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ಹೇಳಿದ್ದಾರೆ.
ಸ್ಥಳದಲ್ಲಿ ಸಿಕ್ಕ ಮಾಹಿತಿಗಳ ಆಧಾರದ ಮೇಲೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ ಬಳಿಕವೇ ಮೃತರ ಹೆಸರು, ವಿವರ ತಿಳಿಯಲಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಹಮೀರ್ಪುರ ಜಿಲ್ಲೆಯಲ್ಲಿ ಅಪಘಾತ: ಹಮೀರ್ಪುರ ಜಿಲ್ಲೆಯ ಮೌದಾಹಾ ಪ್ರದೇಶದಲ್ಲಿರುವ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯಲ್ಲಿ ಇಂದು ಬೆಳಗ್ಗೆ ನಿಂತಿದ್ದ ಟ್ರಕ್ಗೆ ಭಕ್ತರು ತುಂಬಿದ್ದ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಪ್ರಸಾದ್ ಸಿಂಗ್ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಮೌಡಾಹ ಮತ್ತು ಖನ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಿಎಚ್ಸಿ ಮೈಧಾಗೆ ಕಳುಹಿಸಿಕೊಟ್ಟರು. ಅಲ್ಲಿಂದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಮತ್ತೊಂದೆಡೆ ಪೊಲೀಸರು ಮೃತದೇಹವನ್ನು ಬಸ್ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಎರಡು ಗುಂಪುಗಳ ಮಧ್ಯೆ ಗುಂಡಿನ ದಾಳಿ, ಎಂಟು ಜನ ಬಲಿ.. ಮನೆ ತೊರೆದ ಹಲವಾರು ಕುಟುಂಬಗಳು