ಹೈದರಾಬಾದ್(ತೆಲಂಗಾಣ): ತೆಲಂಗಾಣ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಅವರ ಕಚೇರಿಯ ಮೇಲೆ ಪೊಲೀಸರು ದಾಳಿ ಮಾಡಿದ್ದನ್ನು ಖಂಡಿಸಿದ ಪಕ್ಷದ ಸಂಸದರು ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ದಾಳಿಯನ್ನು ಪಿತೂರಿ ಎಂದು ಬಣ್ಣಿಸಿ ಅಧಿವೇಶನ ಮುಂದೂಡಿಕೆಗೆ ನಿರ್ಣಯ ಮಂಡಿಸಿದರು.
ಸುನಿಲ್ ಕನುಗೋಲು ಅವರು ನಡೆಸುತ್ತಿರುವ ‘ಇನ್ಕ್ಲೂಸಿವ್ ಮೈಂಡ್ಸ್’ ಕಚೇರಿ ಮೇಲೆ ಹೈದರಾಬಾದ್ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿದ್ದಲ್ಲದೇ, ದತ್ತಾಂಶಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಇದು ತೆಲಂಗಾಣ ಸರ್ಕಾರ ನಡೆಸಿದ ಪಿತೂರಿಯಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ 2024 ಕಾರ್ಯಪಡೆಯ ಪ್ರಮುಖ ಸದಸ್ಯರಾಗಿರುವ ಸುನಿಲ್ ಕನುಗೋಲು ಅವರು ತೆಲಂಗಾಣ, ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಪ್ರಚಾರ ನಡೆಸುವ ರಣತಂತ್ರ ರೂಪಿಸುತ್ತಿದ್ದರು. ಸೈಬರಾಬಾದ್ನಲ್ಲಿರುವ ಸುನಿಲ್ ಅವರ ಕಚೇರಿಯನ್ನು ಪೊಲೀಸರು ವಶಪಡಿಸಿಕೊಂಡು, ಅವರ ತಂಡ ನಡೆಸುತ್ತಿರುವ ಕೆಲ ಸಾಮಾಜಿಕ ಮಾಧ್ಯಮಗಳ ಖಾತೆಗಳ ವಿರುದ್ಧ ತನಿಖೆಯನ್ನೂ ಪ್ರಾರಂಭಿಸಿದ್ದಾರೆ.
ತೆಲಂಗಾಣದ ಕಾಂಗ್ರೆಸ್ ವಾರ್ ರೂಂ ಎಂದೇ ಹೇಳಲಾಗುವ ಸುನಿಲ್ ಅವರ ಕಚೇರಿಯ ಮೇಲೆ ದಾಳಿ ಮಾಡಿದ್ದಕ್ಕೆ ಎಐಸಿಸಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಇಂದು ಸಂಸತ್ತಿನಲ್ಲಿ ಅಧಿವೇಶನ ಮುಂದೂಡಿಕೆ ನಿರ್ಣಯ ಮಂಡಿಸಿದರು. ಅಲ್ಲದೆ, ಸಂಸದರಾದ ರೇವಂತ್, ಉತ್ತಮ್ ಮತ್ತು ಇತರ ನಾಯಕರು ದೆಹಲಿಯ ತೆಲಂಗಾಣ ಭವನದಲ್ಲಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.