ನವದೆಹಲಿ: ಆನ್ಲೈನ್ ಫರ್ನಿಚರ್ ಸ್ಟೋರ್ ಪೆಪ್ಪರ್ ಪ್ರೈ ಸಹ ಸಂಸ್ಥಾಪಕ ಮತ್ತು ಸಿಇಒ ಅಂಬರೀಶ್ ಮೂರ್ತಿ (51) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂಬರೀಶ್ ಮೂರ್ತಿ ಲೇಹ್ನಲ್ಲಿ ನಿಧನರಾದರು ಎಂದು ಮತ್ತೋರ್ವ ಸಹ ಸಂಸ್ಥಾಪಕ ಆಶಿಶ್ ಶಾ ಮಂಗಳವಾರ ಟ್ವೀಟ್ ಮಾಡಿದ್ದಾರೆ.
"ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮ ಸಂಗಾತಿ ಅಂಬರೀಶ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ನಿನ್ನೆ ರಾತ್ರಿ ಲೇಹ್ ನಲ್ಲಿ ಹೃದಯ ಸ್ತಂಭನದಿಂದ ಅವರು ನಮ್ಮನ್ನು ಅಗಲಿದ್ದಾರೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಆ ಭಗವಂತ ಶಕ್ತಿ ನೀಡಲೆಂದು ಪ್ರಾರ್ಥಿಸಿ" ಎಂದು ಅವರು ಬರೆದಿದ್ದಾರೆ.
ಮೂರ್ತಿ ನಿಧನರಾದ ಸುದ್ದಿಯ ನಂತರ ಟ್ವಿಟರ್ ನಲ್ಲಿ (ಈಗ ಎಕ್ಸ್) ಶ್ರದ್ಧಾಂಜಲಿ ಸಂದೇಶಗಳು ಹರಿದುಬಂದಿವೆ. "ಎರಡು ದಿನಗಳ ಹಿಂದಷ್ಟೇ ಅವರಿಗೆ ಮೆಸೇಜ್ ಮಾಡಿದ್ದೆ ಹಾಗೂ ಅವರನ್ನು PruICICI ಗ್ರೂಪ್ಗೆ ಸೇರಿಸಿಕೊಂಡಿದ್ದೆವು. ನಾವೆಲ್ಲರೂ ಪುನರ್ಮಿಲನವನ್ನು ಸಮಾರಂಭ ಮಾಡಲು ಯೋಜಿಸಿದ್ದೆವು" ಎಂದು ಟ್ವಿಟರ್ನಲ್ಲಿ ಬಳಕೆದಾರರೊಬ್ಬರು ಬರೆದಿದ್ದಾರೆ.
ಮೂರ್ತಿ ಅವರು ತಮ್ಮ ವ್ಯವಹಾರ ವೃತ್ತಿಜೀವನವನ್ನು ಜೂನ್ 1996 ರಲ್ಲಿ ಕ್ಯಾಡ್ಬರಿಯಲ್ಲಿ ಮಾರಾಟ ಮತ್ತು ಮಾರ್ಕೆಟಿಂಗ್ ವೃತ್ತಿಪರರಾಗಿ ಪ್ರಾರಂಭಿಸಿದ್ದರು. ಕ್ಯಾಡ್ಬರಿಯಲ್ಲಿ ಅವರು ಐದೂವರೆ ವರ್ಷಗಳ ಕಾಲ ಕೆಲಸ ಮಾಡಿದರು. ಅವರು ತಮ್ಮ ಪರಿಣತಿಯೊಂದಿಗೆ ಪ್ರುಡೆನ್ಷಿಯಲ್ ಐಸಿಐಸಿಐ ಎಎಂಸಿ (ಈಗ ಐಸಿಐಸಿಐ ಪ್ರುಡೆನ್ಷಿಯಲ್) ಗೆ ಸೇರುವ ಮೂಲಕ ಹಣಕಾಸು ಕ್ಷೇತ್ರಕ್ಕೆ ಕಾಲಿಟ್ಟರು. ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆಯ ಉಪಾಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದರು.
ಲೆವಿಸ್ ನಲ್ಲಿ ಐದು ತಿಂಗಳ ಕಾಲ ಮೂರ್ತಿ ಕೆಲಸ ಮಾಡಿದರು. ಈ ಐದು ತಿಂಗಳ ಅವಧಿಯಲ್ಲಿಯೇ ಅವರು ಸ್ವಂತ ಉದ್ಯಮಿಯಾಗುವ ಕನಸು ಕಂಡಿದ್ದರು. ನಂತರ ಅವರು ತಮ್ಮದೇ ಆದ ಒರಿಜಿನ್ ರಿಸೋರ್ಸಸ್ (Origin Resources) ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಸಹಾಯ ಮಾಡಲು ಈ ಪೋರ್ಟಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ೨೦೦೫ ರಲ್ಲಿ ಈ ಕಂಪನಿಯನ್ನು ಮಾರಾಟ ಮಾಡಿದರು ಮತ್ತು ಬ್ರಿಟಾನಿಯಾದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡರು.
ಮೂರ್ತಿ ಏಳು ತಿಂಗಳ ನಂತರ ಫಿಲಿಪೈನ್ಸ್, ಮಲೇಷ್ಯಾ ಮತ್ತು ಭಾರತದ ಕಂಟ್ರಿ ಮ್ಯಾನೇಜರ್ ಆಗಿ ಇಬೇ ಇಂಡಿಯಾಗೆ (eBay India) ಸೇರಿದರು. ಆರು ವರ್ಷಗಳ ನಂತರ ಅವರು ಜೂನ್ 2011 ರಲ್ಲಿ ಆಶಿಶ್ ಶಾ ಅವರೊಂದಿಗೆ ಸೇರಿ ಪೆಪ್ಪರ್ ಫ್ರೈ ಕಂಪನಿಯನ್ನು ಸ್ಥಾಪಿಸಿದರು. ಪೆಪ್ಪರ್ ಫ್ರೈ ಕಂಪನಿ ಸದ್ಯ 500 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ. 2020 ರ ಹೊತ್ತಿಗೆ ಎಂಟು ಫಂಡಿಂಗ್ ರೌಂಡ್ಗಳ ಮೂಲಕ ಕಂಪನಿಗೆ 244 ಮಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಗೋಲ್ಡ್ ಮನ್ ಸ್ಯಾಚ್ಸ್ ಮತ್ತು ಬರ್ಟೆಲ್ಸ್ ಮನ್ ಇಂಡಿಯಾ ಇನ್ವೆಸ್ಟ್ ಮೆಂಟ್ಸ್ ಇವು ಪೆಪ್ಪರ್ ಫ್ರೈನಲ್ಲಿನ ಪ್ರಮುಖ ಹೂಡಿಕೆದಾರ ಕಂಪನಿಗಳಾಗಿವೆ.
ಇದನ್ನೂ ಓದಿ : India Inflation:ಚಿಲ್ಲರೆ ಹಣದುಬ್ಬರ ಶೇ 6.7ಕ್ಕೆ ಏರಿಕೆ ಸಾಧ್ಯತೆ; ಅರ್ಥಶಾಸ್ತ್ರಜ್ಞರ ಅಂದಾಜು