ನವದೆಹಲಿ: ದೇಶಕ್ಕೆ ಕೀರ್ತಿ ತಂದುಕೊಡಲು ಟೋಕಿಯೋ ಒಲಿಂಪಿಕ್ಗೆ ತೆರಳಲಿರುವ ಎಲ್ಲ ಕ್ರೀಡಾಪಟುಗಳಿಗೆ ಇಡೀ ರಾಷ್ಟ್ರ ಮುಂದೆ ಬಂದು ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ.
74ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಟೋಕಿಯೊ ಒಲಿಂಪಿಕ್ಗೆ ಹೋಗುವ ಪ್ರತಿಯೊಬ್ಬ ಕ್ರೀಡಾಪಟು ಕಷ್ಟಪಟ್ಟಿದ್ದಾರೆ, ಬಹಳ ಸಮಯದಿಂದ ಶ್ರಮಿಸಿದ್ದಾರೆ. ಅವರು ಕೇವಲ ಕ್ರೀಡಾಕೂಟಕ್ಕೆ ಹೋಗುತ್ತಿಲ್ಲ, ಆದರೆ ಅವರು ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಟೋಕಿಯೊಗೆ ಹೋಗುತ್ತಿದ್ದಾರೆ. ಅವರು ಜನರ ಹೃದಯಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೀರ್ ಫಾರ್ ಇಂಡಿಯಾ..
ನಮ್ಮ ಕ್ರೀಡಾಪಟುಗಳ ಮೇಲೆ ಒತ್ತಡ ಹೇರದಂತೆ ನಮ್ಮ ದೇಶದ ನಾಗರಿಕರನ್ನು ನಾನು ಒತ್ತಾಯಿಸಲು ಬಯಸುತ್ತೇನೆ. ಒತ್ತಡದ ಬದಲಿಗೆ ನೀವು ಅವರನ್ನು ಪ್ರೇರೇಪಿಸುವ ಅಗತ್ಯವಿದೆ. #Cheer4India ಹ್ಯಾಶ್ಟ್ಯಾಗ್ ಬಳಸಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ಕಳುಹಿಸಬಹುದು ಎಂದರು.
ಕಳೆದ ವರ್ಷ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ. ನಮ್ಮ ಕ್ರೀಡಾಪಟುಗಳನ್ನು ನಾವು ಒಂದು ದೇಶವಾಗಿ ಹೇಗೆ ಪ್ರೇರೇಪಿಸಬಹುದು ಎಂಬ ಕಲ್ಪನೆ ನಿಮಗೆ ಬಂದರೆ ಅದನ್ನ ನನಗೂ ಕಳುಹಿಸಿ. ನಾವೆಲ್ಲಾ ಒಟ್ಟಾಗಿ ಅವರನ್ನು ಬೆಂಬಲಿಸೋಣ ಎಂದು ಪ್ರಧಾನಿ ತಿಳಿಸಿದ್ದಾರೆ.
ಫ್ಲೈಯಿಂಗ್ ಸಿಖ್..
ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ರನ್ನು ಇದೇ ವೇಳೆ ಮೋದಿ ನೆನೆದರು. ಒಲಿಂಪಿಕ್ ಬಗ್ಗೆ ಮಾತನಾಡುವಾಗ, ನಾವು ಮಿಲ್ಖಾ ಸಿಂಗ್ ಜೀ ಅವರನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಅವರು ಆಸ್ಪತ್ರೆಗೆ ದಾಖಲಾದಾಗ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಟೋಕಿಯೊ ಒಲಿಂಪಿಕ್ಗೆ ಹೋಗುವ ಕ್ರೀಡಾಪಟುಗಳನ್ನು ಪ್ರೇರೇಪಿಸುವಂತೆ ನಾನು ಅವರಿಗೆ ವಿನಂತಿಸಿದ್ದೆ ಎಂದು ಪಿಎಂ ಹೇಳಿದರು.
ಟೋಕಿಯೊ ಒಲಿಂಪಿಕ್ಗೆ ಮೊದಲ ಬಾರಿ ಆಯ್ಕೆಯಾಗಿರುವ ಬಡ ಕುಟುಂಬದಿಂದ ಬಂದ ಕೆಲ ಕ್ರೀಡಾಪಟುಗಳನ್ನು ಪ್ರಧಾನಿ ಹೆಸರಿಸಿದರು. ಬಿಲ್ಲುಗಾರ ಪ್ರವೀಣ್ ಜಾಧವ್, ಭಾರತದ ಮಹಿಳಾ ಹಾಕಿ ತಂಡದ ಸದಸ್ಯೆ ನೇಹಾ ಗೋಯಲ್ ಮತ್ತು ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಜೀವನದ ಏರಿಳಿತಗಳನ್ನು ದಾಟಿ ಸಾಧನೆ ಮಾಡಲು ಹೊರಟಿರುವುದಾಗಿ ತಿಳಿಸಿದರು.