ನವದೆಹಲಿ : ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಸ್ತಬ್ಧಚಿತ್ರ (ಟ್ಯಾಬ್ಲೋ) ತಿರಸ್ಕರಿಸಿದ ನಿರ್ಧಾರವನ್ನು ಮರು ಪರಿಶೀಲಿಸಲಾಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯ ಟ್ಯಾಬ್ಲೋ ಪ್ರದರ್ಶನವನ್ನು ತಿರಸ್ಕರಿಸಿದ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೋರಿದ್ದರು.
ಹೀಗಾಗಿ, ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ರೂಪಿಸಿದ ಟ್ಯಾಬ್ಲೋಗಳು ನಿಯಮಾನುಸಾರವಾಗಿಲ್ಲ. ಇದರಿಂದಾಗಿ ಈ ರಾಜ್ಯಗಳ ಮನವಿ ಮರು ಪರಿಶೀಲಿಸಲಾಗುವುದಿಲ್ಲ.
ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆಯು ಸುದೀರ್ಘವಾಗಿದ್ದು, ತಜ್ಞರ ಸಮಿತಿ ಈಗಾಗಲೇ ಟ್ಯಾಬ್ಲೋಗಳ ಪ್ರದರ್ಶನವನ್ನು ನಿರ್ಧರಿಸಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ 12 ರಾಜ್ಯಗಳ 21 ಸ್ತಬ್ಧಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಅವರು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ, ಹರಿಯಾಣ, ಛತ್ತೀಸ್ಗಢ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕೇರಳ,ತಮಿಳುನಾಡು, ಪಶ್ಚಿಮಬಂಗಾಳದ ಸ್ತಬ್ಧಚಿತ್ರಗಳು ರಕ್ಷಣಾ ಸಚಿವಾಲಯದ ನಿಯಮಗಳನುಸಾರ ಇಲ್ಲದ ಕಾರಣ ಆ ರಾಜ್ಯಗಳ ಟ್ಯಾಬ್ಲೋವನ್ನು ತಜ್ಞರ ಸಮಿತಿ ತಿರಸ್ಕರಿಸಿತ್ತು. ಇದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಬಿಜೆಪಿಯೇತರ ಆಡಳಿತದ ರಾಜ್ಯಗಳ ಟ್ಯಾಬ್ಲೋಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ವಿವಾದ ಸೃಷ್ಟಿಸಲಾಗಿದೆ.
ಇದನ್ನೂ ಓದಿ: ನಾಳೆ ಭೂಮಿಯ ಸಮೀಪ ಹಾದುಹೋಗಲಿದೆ ದೈತ್ಯ ಕ್ಷುದ್ರಗ್ರಹ: ನೋಡುವುದು ಹೇಗೆ? ಪರಿಣಾಮವೇನು? ಇಲ್ಲಿದೆ ಮಾಹಿತಿ