ಮುಂಬೈ : ಕಳೆದ ಎಂಟು ದಿನಗಳಿಂದ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಪ್ರಶ್ನಿಸುವವರು ಯಾರೂ ಇಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ತಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ, ಬೆಳಗಾವಿಯಲ್ಲಿ ಮರಾಠಿಗರ ಮೇಲಾಗುತ್ತಿರುವ ಹಲ್ಲೆ ಬಗ್ಗೆ ಕೇಳೋರ್ಯಾರೂ ಇಲ್ಲ.
ನಮ್ಮ ಜನರನ್ನು ಬೆಂಬಲಿಸಲು ಸರ್ವಪಕ್ಷಗಳ ನಿಯೋಗದೊಂದಿಗೆ ಬೆಳಗಾವಿಗೆ ಹೋಗಬೇಕೆಂದು ನಾನು ಮಹಾರಾಷ್ಟ್ರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ ಎಂದು ರಾವತ್ ತಿಳಿಸಿದರು.
ಇದನ್ನೂ ಓದಿ: ಶಿವಸೇನೆ ಮುಖಂಡನ ಕಾರಿನ ಮೇಲಿದ್ದ ಮರಾಠಿ ಬೋರ್ಡ್ ಕಿತ್ತ ಕರವೇ ಕಾರ್ಯಕರ್ತರು
ಕನ್ನಡಿಗರು-ಮರಾಠಿಗರ ನಡುವೆ ಸಂಘರ್ಷ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ಪುಂಡಾಟ ಪ್ರದರ್ಶಿಸಿದ ಶಿವಸೇನೆ ಕಾರ್ಯಕರ್ತರ ವರ್ತನೆಗೆ ಬೆಳಗಾವಿಯಲ್ಲಿ ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಮರಾಠಿ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಅಲ್ಲದೇ ಶಿವಸೇನೆ ಮುಖಂಡ ಪ್ರಕಾಶ್ ಶಿರೋಡಕರ್ ಅವರ ಕಾರಿನ ಮೇಲಿದ್ದ ಮರಾಠಿ ಬೋರ್ಡ್ ಕಿತ್ತಿದ್ದರು.