ರಾಜೌರಿ(ಜಮ್ಮು ಮತ್ತು ಕಾಶ್ಮೀರ): ರಾಜೌರಿಯ ಅಪ್ಪರ್ ಡ್ಯಾಂಗ್ರಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಮಗುವೊಂದು ಸಾವನ್ನಪ್ಪಿದೆ. ಇದೇ ವೇಳೆ, ಐವರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದೇ ವೇಳೆ ಶಂಕಿತ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ತೆರವುಗೊಳಿಸಲಾಗಿದೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ತಿಳಿಸಿದ್ದಾರೆ. ನಿನ್ನೆಯಷ್ಟೇ ಇದೇ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದರು.
ಘಟನೆಯ ವಿವರ: ನಿನ್ನೆ ಸಂಜೆ ಡ್ಯಾಂಗ್ರಿ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಮೂರು ವಸತಿ ಗೃಹಗಳಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರು. 13 ಜನ ಗಾಯಗೊಂಡಿದ್ದರು. ಅವರಲ್ಲಿ ಮೂವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಸೇನಾ ಸಮವಸ್ತ್ರ ಧರಿಸಿದ್ದ ಇಬ್ಬರು ಅಲ್ಲಿನ ನಿವಾಸಿಗಳ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ನ್ಯಾಯಕ್ಕಾಗಿ ಪ್ರತಿಭಟನೆ: ಹತ್ಯೆಗೊಳಗಾದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ನಿನ್ನೆ ರಾತ್ರಿ ಸ್ಥಳೀಯರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಡ್ಯಾಂಗ್ರಿಯಲ್ಲಿರುವ ಮುಖ್ಯ ಚೌಕ್ನಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿ ನಿವಾಸಿಗಳಿಗೆ ಭದ್ರತೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದ್ದರು. ಜಿಲ್ಲಾಡಳಿತ ನಮಗೆ ಯಾವುದೇ ಭದ್ರತೆ ನೀಡುತ್ತಿಲ್ಲ. ಮನೋಜ್ ಸಿನ್ಹಾ ಇಲ್ಲಿಗೆ ಬಂದು ನಮ್ಮ ಬೇಡಿಕೆಗಳನ್ನು ಆಲಿಸಲಿ ಎಂದು ಪ್ರತಿಭಟನಾನಿರತರೊಬ್ಬರು ಹೇಳಿದ್ದರು.
ಇದನ್ನೂ ಓದಿ: ಜಮ್ಮುವಿನಲ್ಲಿ ಗುಂಡಿನ ದಾಳಿಗೆ ಮೂವರು ಬಲಿ, 13 ಜನರಿಗೆ ಗಾಯ: ಭಯೋತ್ಪಾದಕ ಕೃತ್ಯದ ಶಂಕ
ಇದನ್ನು ಪರಿಗಣಿಸಿರುವ ಲೆ.ಗವರ್ನರ್ ಮನೋಜ್ ಸಿನ್ಹಾ ಗುಂಡಿನ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಮತ್ತು ಸರ್ಕಾರಿ ಉದ್ಯೋಗ ಘೋಷಿಸಿದ್ದಾರೆ. 'ಭೀಕರ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ ಹಣಕಾಸು ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಲಾಗುವುದು. ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಮತ್ತು ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಡಿಸೆಂಬರ್ 16ರಂದು ಅದೇ ಜಿಲ್ಲೆಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಸೇನೆಯೊಂದಿಗೆ ಪೋರ್ಟರ್ಗಳಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತರು ಬೆಳಿಗ್ಗೆ 6.15 ರ ಸುಮಾರಿಗೆ ಜಿಲ್ಲೆಯ ಆರ್ಮಿ ಕ್ಯಾಂಪ್ನ ಆಲ್ಫಾ ಗೇಟ್ ಸಮೀಪಿಸುತ್ತಿದ್ದರು. ಈ ವೇಳೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅಲ್ಲದೇ ಡಿಸೆಂಬರ್ 28 ರಂದು ಜಮ್ಮು ಜಿಲ್ಲೆಯ ಸಿದ್ರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದರು.