ಮುಂಬೈ: ರಾಣಿ ಎಲಿಜಬೆತ್ ನಿಧನಕ್ಕೆ ಮುಂಬೈನ ಸಂಪೂರ್ಣ ಡಬ್ಬಾವಾಲಾ ಸಮುದಾಯ ಶೋಕ ವ್ಯಕ್ತಪಡಿಸಿದ್ದು, ರಾಜ ಕುಟುಂಬದವರ ದುಃಖದಲ್ಲಿ ತಾವು ಭಾಗಿಯಾಗಿರುವುದಾಗಿ ಹೇಳಿದ್ದಾರೆ. ಮುಂಬೈನ ಎಲ್ಲ ಡಬ್ಬಾವಾಲಾಗಳ ಪರವಾಗಿ ನಾನು ರಾಜಮನೆತನಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಸಲ್ಲಿಸುತ್ತೇನೆ ಎಂದು ನೂತನ ಮುಂಬೈ ಟಿಫಿನ್ ಬಾಕ್ಸ್ ಸಪ್ಲೈಯರ್ಸ್ ಅಸೋಸಿಯೇಷನ್ ಸಂಘದ ಪದಾಧಿಕಾರಿ ರಘುನಾಥ್ ಮೆಡ್ಗೆ ಹೇಳಿದರು.
ಊಟದ ಡಬ್ಬಿಗಳನ್ನು ಮನೆಗಳಿಂದ ಕಚೇರಿಗಳಿಗೆ ತಲುಪಿಸುವ ಡಬ್ಬಾವಾಲಾಗಳು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಹಲವಾರು ವರ್ಷಗಳವರೆಗೆ ಜಗತ್ತಿಗೆ ಇವರ ಕೆಲಸದ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ, ರಾಣಿ ಎಲಿಜಬೆತ್ ಹಾಗೂ ರಾಜಕುಟುಂಬದ ಕಾರಣದಿಂದ ಇವರು ಎಲ್ಲರಿಗೂ ಚಿರಪರಿಚಿತರಾದರು.
ಏಪ್ರಿಲ್ 2005 ರಲ್ಲಿ ನಡೆದ ಪ್ರಿನ್ಸ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಪಾರ್ಕರ್-ಬೌಲ್ಸ್ ಅವರ ರಾಜಮನೆತನ ವಿವಾಹ ಸಮಾರಂಭದಲ್ಲಿ ಮೆಡ್ಗೆ ಮತ್ತು ಸಂಘದ ಮತ್ತೋರ್ವ ಪದಾಧಿಕಾರಿ ಸೋಪನ್ ಮರೆ ಭಾಗವಹಿಸಿದ್ದರು ಎಂಬುದು ಗಮನಾರ್ಹ. ರಾಜಮನೆತನದ ವಿವಾಹಕ್ಕಾಗಿ ತನ್ನ ಎಂಟು ದಿನಗಳ ಲಂಡನ್ ಭೇಟಿಯನ್ನು ನೆನಪಿಸಿಕೊಂಡ ಮೆಡ್ಗೆ, ವಿಂಡ್ಸರ್ ಕ್ಯಾಸಲ್ನಲ್ಲಿ ರಾಣಿ ಎಲಿಜಬೆತ್ ಮತ್ತು ರಾಜಮನೆತನದ ಇತರ ಸದಸ್ಯರೊಂದಿಗೆ ತಾವು ಉಪಾಹಾರ ಸೇವಿಸಿದ್ದನ್ನು ಸ್ಮರಿಸಿದರು.
ನವೆಂಬರ್ 2008 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದಾಗ ರಾಣಿ ಎಲಿಜಬೆತ್, ಡಬ್ಬಾವಾಲಾಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದರು ಎಂದು ಮೆಡ್ಗೆ ಜ್ಞಾಪಿಸಿಕೊಂಡರು.
ಇದನ್ನೂ ಓದಿ: ಹೊಸ ಪ್ರಧಾನಿ ಲಿಜ್ ಟ್ರಸ್ಗೆ ಬ್ರಿಟನ್ ರಾಣಿಯಿಂದ ಅಧಿಕಾರ ಹಸ್ತಾಂತರ