ಕೋಜಿಕೋಡ್ : ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿದ್ದ ಕ್ಯಾನ್ಸರ್ ರೋಗಿ ನಂದು ಮಹಾದೇವ, ಕೋಜಿಕೋಡ್ ಎಂವಿಆರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ನಂದು ಮಹಾದೇವ ತಿರುವನಂತಪುರಂನ ಭರತನೂರ್ ಮೂಲದ 27 ವರ್ಷದ ಯುವಕ. ಮೂರು ವರ್ಷದ ಹಿಂದೆ ಈತನಿಗೆ ಕ್ಯಾನ್ಸರ್ ದೃಢಪಟ್ಟಿತ್ತು.
ಇದರಿಂದ ಕುಗ್ಗದೇ ತನ್ನಂತೆ ಕ್ಯಾನ್ಸರ್ಗೆ ಒಳಗಾದ ರೋಗಿಗಳ ಆರ್ಥಕ ನೆರವಿಗಾಗಿ ‘ಅತಿಜೀವನಂ’ ಎಂಬ ಸಂಘವೊಂದನ್ನು ಕಟ್ಟಿ, ಹಲವರಿಗೆ ಆಸರೆಯಾಗಿ ಕೇರಳದ ಯುವಜನತೆಗೆ ನಿಜವಾದ ಹೀರೋ ಆಗಿದ್ದ.
ಕ್ಯಾನ್ಸರ್ನಿಂದ ಚೇತರಿಸಿಕೊಳ್ಳುವ ಕುರಿತು ಹಲವು ಸಂದೇಶಗಳನ್ನು ನೀಡುತ್ತಾ ನೂರಾರು ರೋಗಿಗಳಲ್ಲಿ ಸಕಾರಾತ್ಮಕತೆ ಮತ್ತು ಶಕ್ತಿಯನ್ನು ತುಂಬುತ್ತಿದ್ದ. ಕಾಯಿಲೆ ಆತನ ಮೇಲೆ ಹಿಡಿತ ಸಾಧಿಸುತ್ತಿದ್ದಾಗಲೂ, ಅದನ್ನು ಒಂದು ಕಿರುನಗೆಯಿಂದ ಎದುರಿಸಿ ವಾಸಿಯಾಗುವವರೆಗೂ ಹೋರಾಡಬಲ್ಲೆ ಎಂದು ಇತರರಿಗೆ ಪ್ರೇರಣೆ ನೀಡಿದ್ದ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, "ಜೀವನದ ಯಾವುದೇ ಹಂತದಲ್ಲಿ ಯಾರೂ ವಿಫಲರಾಗಬಾರದು" ಎಂದು ಆತ್ಮಸ್ಥೈರ್ಯ ತುಂಬಿದ್ದ.
ನಂದುಗೆ 24 ವರ್ಷವಿದ್ದಾಗ ಮೊಣಕಾಲಿನ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಈ ವೇಳೆ ಮೂಳೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಹಾಗಾಗಿ, ಒಂದು ಕಾಲನ್ನು ಕತ್ತರಿಸಲಾಯಿತು. ನಂತರ, ಇದು ಶ್ವಾಸಕೋಶದ ಮೇಲೂ ಪರಿಣಾಮ ಬೀರಿತ್ತು.
ಬಳಿಕ ಮಹಾಮಾರಿ ತನ್ನ ಇಡೀ ದೇಹವನ್ನು ಆವರಿಸಿಕೊಳ್ಳುತ್ತಿದ್ದರೂ, ತನ್ನ ಚಲ ಮಾತ್ರ ಬಿಟ್ಟಿರಲಿಲ್ಲ. ಬದಲಾಗಿ ರೋಗವನ್ನು ತನ್ನ ಲವರ್ನಂತೆ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದ.
ಇನ್ನು, ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಅಪಾರ ಸ್ನೇಹಿತರ ಬಳಗವನ್ನು ನಂದು ಹೊಂದಿದ್ದ. ಧೈರ್ಯ ಹಾಗೂ ಬದುಕುಳಿಯುವುದರ ಬಗೆಗೆ ಈತನಿಗಿದ್ದ ಮನೋಬಲವನ್ನು ಈತನ ಸ್ನೇಹಿತರು ಕೂಡ ಬಹಳ ಬೆಂಬಲಿಸುತ್ತಿದ್ದರು.
ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಅಂದಿನ ಟ್ರೆಂಡಿಂಗ್ ಫಾಲೋ ಆಗುತ್ತಿದ್ದ. ಫೇಸ್ಬುಕ್ನಲ್ಲಿ ಟ್ರೆಂಡಿಂಗ್ ಆಗಿದ್ದ ಹಳೆಯ ಫೋಟೋ ಹಾಗೂ ಪ್ರಸ್ತುತದ ಫೋಟೋ ಚಾಲೆಂಜ್ ಸ್ವೀಕರಿಸಿ ಹಳೆಯ ಫೋಟೋವನ್ನು ಹಾಗೂ ಚಿಕಿತ್ಸೆ ಬಳಿಕ ಕೂದಿಲಿಲ್ಲದ ಫೋಟೋವನ್ನು ಶೇರ್ ಮಾಡಿ ಬಾರಿ ವೈರಲ್ ಆಗಿದ್ದ.
ಖ್ಯಾತಿಗೆ ಯಾವುದೇ ಸಂಬಂಧವಿಲ್ಲ, ನಮಗೆ ಹತ್ತಿರವಿರುವವರೇ ಹೆಚ್ಚು ಮುಖ್ಯ. ನಂದು ಯಾರು ಎಂದು ಕೇಳಿದಾಗ ನಮ್ಮ ಕುಟುಂಬದಲ್ಲಿ ಒಬ್ಬನಂತೆ ಇದ್ದಾನೆ ಎಂದು ಹೇಳಿದರೆ ಅದಕ್ಕಿಂತ ದೊಡ್ಡ ಸಂತಸ ಇನ್ನೊಂದಿಲ್ಲ ಎಂದು, ತನ್ನ ಕೊನೆಯ ದಿನಗಳಲ್ಲಿ ಹೇಳಿಕೊಂಡಿದ್ದ. ಕ್ಯಾನ್ಸರ್ ತೀವ್ರತೆ ಹೆಚ್ಚಾಗಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಕೊನೆಯುಸಿರೆಳೆದಿದ್ದಾನೆ.
"ನಾನು ಸಮುದ್ರ ಮಟ್ಟದಿಂದ 3,080 ಅಡಿ ಎತ್ತರದ ಪಂಚಲಿಮೆಡು ಎಂಬ ಬೆಟ್ಟವನ್ನು ಒಂದು ಕಾಲಿನಲ್ಲೇ ಹತ್ತಿದ್ದೆ, ಅದು ಕೂಡ 20 ನಿಮಿಷಗಳಲ್ಲಿ ಎಂದು ನಂದು ಒಮ್ಮೆ ಬರೆದುಕೊಂಡಿದ್ದನು. ಬಹುಶಃ ಇಂದು ಜೀವಂತವಾಗಿದ್ದಿದ್ದರೇ ಹಿಮಾಲಯವನ್ನು ಸಹ ಹತ್ತುತ್ತಿದ್ದ ಎಂದು ಅವನಿಂದ ಪ್ರೇರಿತರಾದ ಹಲವರು ದುಃಖತಪ್ತರಾಗಿ ಹೇಳಿಕೊಂಡಿದ್ದಾರೆ.