ಕೇರಳ: ದೇಶದ ಒಟ್ಟು ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಕಳೆದ ನಾಲ್ಕು ವಾರಗಳಲ್ಲಿ ಕೇರಳದಿಂದ ವರದಿಯಾದ ಹೊಸ ಪ್ರಕರಣಗಳ ಏರಿಕೆಯ ಕುರಿತು ಕೂಡಾ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಜುಲೈ 28ರ ವೇಳೆಗೆ ದೇಶದಲ್ಲಿರುವ ಒಟ್ಟು 3,99,436 ಸಕ್ರಿಯ ಪ್ರಕರಣಗಳ ಪೈಕಿ 1,45,876 ಪ್ರಕರಣಗಳು ಕೇರಳದಲ್ಲಿದೆ.
ಕೊಟ್ಟಾಯಂನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 64ರಷ್ಟು ಹೆಚ್ಚಳವಾಗಿದೆ. ಮಲಪ್ಪುರಂನಲ್ಲಿ ದೈನಂದಿನ ಹೊಸ ಪ್ರಕರಣಗಳಲ್ಲಿ ಶೇಕಡಾ 59ರಷ್ಟು ಹೆಚ್ಚಳವಾಗಿದ್ದು, ನಂತರದ ಸ್ಥಾನದಲ್ಲಿ ಎರ್ನಾಕುಲಂ (46.5 ಶೇಕಡಾ) ಮತ್ತು ತ್ರಿಶೂರ್ (45.4 ಶೇಕಡಾ) ಇದೆ.
ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದದ್ದಾರೆ. ಜುಲೈ 5ರಿಂದ ಜುಲೈ 9ರವರೆಗೆ ಕೇರಳಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ರಾಜೇಶ್ ಭೂಷಣ್, ಕೇರಳದಲ್ಲಿ ಕೊರೊನಾ ನಿಯಂತ್ರಿಸುವ ವಿಷಯದಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ.
ಸಾಮೂಹಿಕ/ಸಾಮಾಜಿಕ ಕೂಟಗಳ ಮಾರ್ಗಸೂಚಿಗಳ ಅನುಸರಣೆ ಕಟ್ಟುನಿಟ್ಟಾಗಿ ಮತ್ತು ಸರಿಯಾಗಿ ಜಾರಿಗೊಳಿಸಬೇಕಾಗಿದೆ. ವ್ಯಾಕ್ಸಿನೇಷನ್ ಹೆಚ್ಚಿಸುವುದು ಮತ್ತು ವ್ಯಾಕ್ಸಿನ್ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದು ಅಗತ್ಯ ಎಂದು ಭೂಷಣ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಮ್ಮ ಪತ್ರದಲ್ಲಿ ಕೇರಳದಲ್ಲಿ ಜುಲೈ 10 ಮತ್ತು ಜುಲೈ 19ರ ನಡುವೆ 91,617 ಹೊಸ ಪ್ರಕರಣಗಳು ಮತ್ತು 775 ಕೋವಿಡ್ ಸಂಬಂಧಿತ ಸಾವುಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.