ಕೊಚ್ಚಿ(ಕೇರಳ): ಬಾಲಕಿಯೊಬ್ಬಳಿಗೆ ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕೇರಳ ಹೈಕೋರ್ಟ್ ಇಂದು ಅನುಮತಿಸಿತು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ನೀಡಿದ್ದ ಆದೇಶ ಹಾಗೂ ಆಗಸ್ಟ್ 4 ರಂದು ರಾಜ್ಯ ಸರ್ಕಾರ ನೀಡಿರುವ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಈ ಅನುಮತಿ ನೀಡಿದೆ.
9 ವರ್ಷದ ಬಾಲಕಿ ತನ್ನ ತಂದೆಯ ಜೊತೆ ಆಗಸ್ಟ್ 23 ರಂದು ಶಬರಿಮಲೆಗೆ ಹೋಗಲು ಅನುಮತಿ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದ್ದಳು.
ಬಾಲಕಿಯ ಪರ ವಾದ ಮಂಡಿಸಿದ ವಕೀಲರು, ಆಕೆ 10 ವರ್ಷ ತುಂಬುವ ಮುನ್ನವೇ ಶಬರಿಮಲೆಗೆ ಹೋಗಲು ಬಯಸಿದ್ದಾಳೆ. ಈ ಅವಕಾಶ ತಪ್ಪಿದಲ್ಲಿ ಮುಂದಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ಗೆ ಮನವರಿಕೆ ಮಾಡಿದ್ದರು.