ನವ ದೆಹಲಿ: ರೈಲುಗಳಲ್ಲಿನ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕಳೆದ ಏಳು ತಿಂಗಳಲ್ಲಿ ರೈಲ್ವೇ ಕ್ಯಾಟಿರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ)ಗೆ 5,000ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2022 ಏಪ್ರಿಲ್ 1 ರಿಂದ ಅಕ್ಟೋಬರ್ 31ರವರೆಗೆ ಐಆರ್ಸಿಟಿಸಿಗೆ ರೈಲುಗಳಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಒಟ್ಟು 5,869 ದೂರುಗಳು ಬಂದಿವೆ. ಆಹಾರ ಗುಣಮಟ್ಟದ ಬಗ್ಗೆ ಸಲ್ಲಿಕೆಯಾದ ದೂರಿನ ಮೇಲೆ ಸೇವಾ ಪೂರೈಕೆದಾರರ ವಿರುದ್ಧ ದಂಡ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸೂಚಿಸಿದ ಮಾನದಂಡಗಳ ಪ್ರಕಾರವೇ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟ ಮತ್ತು ಆರೋಗ್ಯಕರ ಆಹಾರ ಒದಗಿಸುವುದು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ. ಪ್ರೀಮಿಯಂ ರೈಲುಗಳಲ್ಲಿ (ರಾಜಧಾನಿ, ಶತಾಬ್ದಿ, ಡ್ಯುರಂಟೋ, ಗತಿಮಾನ್, ತೇಜಸ್, ವಂದೇ ಭಾರತ್) ಐಚ್ಛಿಕ ಅಡುಗೆ ಸೇವೆ ಆರಂಭಿಸಲಾಗಿದೆ. ಈ ಯೋಜನೆಯಲ್ಲಿ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ, ಈ ರೈಲುಗಳಲ್ಲಿ ಒದಗಿಸಲಾಗುವ ಆಹಾರ ವ್ಯವಸ್ಥೆಗಳಿಂದ ಹೊರಗುಳಿಯುವ ಆಯ್ಕೆಯನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: 2000 ರೂಪಾಯಿ ನೋಟು ಮುದ್ರಣ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ