ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಫೆಬ್ರವರಿ 1 ರಂದು ಐದನೇ ಬಾರಿಗೆ ಲೋಕಸಭೆಯಲ್ಲಿ ಭಾರತದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇಡೀ ವರ್ಷದ ದೇಶದ ವಿವಿಧ ಇಲಾಖೆಗಳ ವೆಚ್ಚಕ್ಕಾಗಿ ಈ ಬಜೆಟ್ ಅನ್ನು ಸಿದ್ಧಪಡಿಸಲಾಗಿದೆ. ದೇಶದಾದ್ಯಂತ ಜನರು ಈ ಬಜೆಟ್ಗಾಗಿ ಕಾಯುತ್ತಿದ್ದಾರೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯುವುದರೊಂದಿಗೆ, ಕೇಂದ್ರ ಬಜೆಟ್ ಪ್ರಪಂಚದಾದ್ಯಂತದ ಆರ್ಥಿಕ ನೀತಿ ವೀಕ್ಷಕರಲ್ಲಿ ಪ್ರಮುಖವಾಗಿ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಬಜೆಟ್ಗೆ ಸಂಬಂಧಿಸಿದ ಸಂಪ್ರದಾಯಗಳು, ಆಚರಣೆಗಳು, ಕೆಲವು ಪ್ರಮುಖ ಬದಲಾವಣೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ನೋಡೋಣ ಬನ್ನಿ.
1. ಭಾರತದ ಮೊದಲ ಬಜೆಟ್: ಭಾರತದ ಮೊದಲ ಬಜೆಟ್ ಅನ್ನು ಏಪ್ರಿಲ್ 7, 1860 ರಂದು ಮಂಡಿಸಲಾಯಿತು. ಆಗ ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತವಾಗಿರಲಿಲ್ಲ. ಆದರೆ ಸ್ವತಂತ್ರ ಭಾರತದ ಮೊದಲ ಬಜೆಟ್ ಬಗ್ಗೆ ಮಾತನಾಡುವುದಾದರೆ, ಅದನ್ನು 26 ನವೆಂಬರ್ 1947 ರಂದು ಮಂಡಿಸಲಾಯಿತು. ಆಗ ಹಣಕಾಸು ಸಚಿವರಾಗಿದ್ದವರು ಆರ್ ಕೆ ಷಣ್ಮುಖಂ ಚೆಟ್ಟಿ. ಆ ಬಜೆಟ್ನಲ್ಲಿ ಭಾರತದ ಆರ್ಥಿಕತೆಯ ಮೂಲ ಅವಲೋಕನವಿತ್ತು ಮತ್ತು ಅದರಲ್ಲಿ ಯಾವುದೇ ಬದಲಾವಣೆ ಅಥವಾ ಪ್ರಸ್ತಾಪವನ್ನು ಮಾಡಲಾಗಿರಲಿಲ್ಲ.
2. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಚಿವರು: ಹಣಕಾಸು ಸಚಿವರಾಗಿ ಅನೇಕ ಬಾರಿ ಬಜೆಟ್ ಮಂಡಿಸುವ ಅವಕಾಶ ಯಾರಿಗೆ ಸಿಕ್ಕಿದೆ ಗೊತ್ತಾ? ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಇಟ್ಟುಕೊಂಡಿದ್ದಾರೆ. ಅವರು ಗರಿಷ್ಠ 10 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದಾದ ನಂತರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ 9 ಬಾರಿ, ಮಾಜಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮತ್ತು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ತಲಾ ಎಂಟು ಬಾರಿ ಸಾಮಾನ್ಯ ಬಜೆಟ್ ಮಂಡಿಸಿದ್ದಾರೆ. ಮತ್ತೊಂದೆಡೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಒಟ್ಟು 6 ಬಾರಿ ಬಜೆಟ್ ಮಂಡಿಸುವ ಅವಕಾಶ ಪಡೆದರು. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ.
3. ಕೇಂದ್ರ ಬಜೆಟ್ ಯಾರ ಕಲ್ಪನೆ?: ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುತ್ತದೆ. ಈ ವಿಚಾರ ನಮ್ಮೆಲ್ಲರಿಗೂ ತಿಳಿದಿರುವಂಥದ್ದೇ ಆಗಿದೆ. ಆದರೆ ಯಾವ ವ್ಯಕ್ತಿಯು ಬಜೆಟ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂಬುದೇನಾದರೂ ಗೊತ್ತೇ? ಬಹುಶಃ ಅನೇಕರಿಗೆ ಇದು ತಿಳಿದಿರಲಿಕ್ಕಿಲ್ಲ. ಪ್ರೊಫೆಸರ್ ಪ್ರಶಾಂತ್ ಚಂದ್ರ ಮಹಲನೋಬಿಸ್ ಅವರು ಕೇಂದ್ರ ಬಜೆಟ್ ಪರಿಕಲ್ಪನೆಯನ್ನು ವಿನ್ಯಾಸಗೊಳಿಸಿದ ವ್ಯಕ್ತಿ. ಅವರು ಭಾರತೀಯ ವಿಜ್ಞಾನಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಭಾರತದ ಯೋಜನಾ ಆಯೋಗದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತದಲ್ಲಿ ಆಧುನಿಕ ಅಂಕಿ - ಅಂಶಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪಿಸಿ ಮಹಲನೋಬಿಸ್ ಅವರು ಸ್ವತಂತ್ರ ಭಾರತದ ಬಜೆಟ್ ಅನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
4. ಕೇಂದ್ರ ಬಜೆಟ್ ಮಂಡಿಸಿದ ಮೊದಲ ಪ್ರಧಾನಿ: ಕೇಂದ್ರ ಬಜೆಟ್ ಅನ್ನು ಸಾಮಾನ್ಯವಾಗಿ ಹಣಕಾಸು ಸಚಿವರು ಮಂಡಿಸುತ್ತಾರೆ. ಆದರೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು 1958-1959 ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಜವಾಹರಲಾಲ್ ನೆಹರೂ ಅವರನ್ನು ಹೊರತುಪಡಿಸಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಜೆಟ್ ಮಂಡಿಸಿದ ಏಕೈಕ ಪ್ರಧಾನಿಗಳು.
5. ಕೇಂದ್ರ ಬಜೆಟ್ ಮಂಡಿಸದ ಸಚಿವರು: ಕೆ.ಸಿ. ನಿಯೋಗಿ ಮತ್ತು ಎಚ್.ಎನ್. ಬಹುಗುಣ ಮಾತ್ರ ಕೇಂದ್ರ ಬಜೆಟ್ ಮಂಡಿಸದ ಭಾರತದ ಇಬ್ಬರು ಹಣಕಾಸು ಸಚಿವರಾಗಿದ್ದಾರೆ. ಏಕೆಂದರೆ ಎರಡು ಬಜೆಟ್ ದಿನಗಳ ನಡುವೆ ಕಡಿಮೆ ಅವಧಿಗೆ ಅವರು ಅಧಿಕಾರ ಹಿಡಿದಿದ್ದು, ಬಜೆಟ್ ಮಂಡಿಸಲು ಅವಕಾಶವೇ ಸಿಗಲಿಲ್ಲ. ನಿಯೋಗಿ ಅವರು ಭಾರತದ ಎರಡನೇ ಹಣಕಾಸು ಸಚಿವರಾಗಿದ್ದರು. ಅವರು ಕೇವಲ 35 ದಿನಗಳು ಮಾತ್ರ ಕಚೇರಿಯಲ್ಲಿದ್ದರು.
6. ಸುದೀರ್ಘ ಬಜೆಟ್ ಮತ್ತು ಭಾಷಣ: ಇದುವರೆಗಿನ ದೀರ್ಘ ಬಜೆಟ್ ಎಂದರೆ 18,650 ಪದಗಳು. ಡಾ. ಮನಮೋಹನ್ ಸಿಂಗ್ ಅವರು ಮಂಡಿಸಿದ 1991 ರ ಐತಿಹಾಸಿಕ ಬಜೆಟ್ ಇದಾಗಿದೆ. ಆದಾಗ್ಯೂ, 2020 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಬಜೆಟ್ ಭಾಷಣ ಮಾಡಿದರು. ಇದು 2 ಗಂಟೆ 17 ನಿಮಿಷಗಳ ಕಾಲ ನಡೆಯಿತು. 1977 ರಲ್ಲಿ ಹಿರೂಭಾಯಿ ಪಟೇಲ್ ಅವರು ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ಮಾಡಿದ್ದರು. ಅದು 800 ಪದಗಳನ್ನು ಹೊಂದಿತ್ತು. ಬಜೆಟ್ನ ಭಾಷೆಯ ಬಗ್ಗೆ ಮಾತನಾಡುವುದಾದರೆ, 1955-56 ರಿಂದ ಬಜೆಟ್ ದಾಖಲೆಯನ್ನು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಮುದ್ರಿಸಲಾಗುತ್ತದೆ. ಮೊದಲು ಬಜೆಟ್ ಅನ್ನು ಇಂಗ್ಲಿಷ್ನಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು.
7. ಬಜೆಟ್ ಮುದ್ರಿಸುವ ಸ್ಥಳ: ಭಾರತೀಯ ಕೇಂದ್ರ ಬಜೆಟ್ನ ಮುದ್ರಣವನ್ನು 1950 ರವರೆಗೆ ರಾಷ್ಟ್ರಪತಿ ಭವನದಲ್ಲಿ ಮಾಡಲಾಗುತ್ತಿತ್ತು. ಆದರೆ, ಬಜೆಟ್ನ ಮುದ್ರಣ ಸೋರಿಕೆಯಾದ ನಂತರ ಅದನ್ನು ಹೊಸದಿಲ್ಲಿಯ ಮಿಂಟೋ ರಸ್ತೆಗೆ ಸ್ಥಳಾಂತರಿಸಲಾಯಿತು. 1980 ರಲ್ಲಿ ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಲಾಯಿತು. ಇವತ್ತಿಗೂ ಅಲ್ಲಿಯೇ ಬಜೆಟ್ ಪ್ರಿಂಟ್ ಆಗುತ್ತದೆ.
8. ಬಜೆಟ್ ಸಮಯದಲ್ಲಿ ಬದಲಾವಣೆ: 1999 ರವರೆಗೆ ಸಂಜೆ 5 ಗಂಟೆಗೆ ಬಜೆಟ್ ಭಾಷಣ ಮಾಡಲಾಗುತ್ತಿತ್ತು. ಇದು ಬ್ರಿಟಿಷರ ಕಾಲದ ಸಂಕೇತವಾಗಿತ್ತು. ಈ ಸಮಯ ಲಂಡನ್ನಲ್ಲಿರುವ ಬ್ರಿಟಿಷ್ ಸಂಸತ್ತಿನ ಸಮಯದ ಪ್ರಕಾರ ಬೆಳಗಿನ 11:30 ಆಗಿರಬಹುದು. ವಿತ್ತ ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆ ಸಮಯವನ್ನು ಬೆಳಗಿನ 11 ಗಂಟೆಗೆ ಬದಲಾಯಿಸಿದರು. ಮೊದಲ 30 ವರ್ಷಗಳ ಕಾಲ ಬಜೆಟ್ನಲ್ಲಿ ಮೂಲಸೌಕರ್ಯ ಎಂಬ ಪದವೇ ಇರಲಿಲ್ಲ. ಇದನ್ನು 1900 ರ ಬಜೆಟ್ನಲ್ಲಿ ಪರಿಚಯಿಸಲಾಯಿತು.
9. ಮಧ್ಯಂತರ ಮತ್ತು ಕೇಂದ್ರ ಬಜೆಟ್: ಚುನಾವಣಾ (ಲೋಕಸಭೆ) ವರ್ಷದಲ್ಲಿ ಹೊರಹೋಗುವ ಸರ್ಕಾರ ಮಂಡಿಸುವ ಬಜೆಟ್ ಅನ್ನು ಮಧ್ಯಂತರ ಬಜೆಟ್ ಎನ್ನಲಾಗುತ್ತದೆ. ಮಧ್ಯಂತರ ಬಜೆಟ್ ಅನ್ನು ವೋಟ್ ಆನ್ ಅಕೌಂಟ್ ಎಂದೂ ಕರೆಯುತ್ತಾರೆ. ಸೀಮಿತ ಅವಧಿಗೆ ಖರ್ಚು ಮಾಡಲು ಸಂಸತ್ತಿನ ಅನುಮತಿ ಪಡೆಯಲು ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಚುನಾವಣೆಯ ನಂತರ, ಹೊಸ ಸರ್ಕಾರವು ಬಜೆಟ್ ಅನ್ನು ಅಂತಿಮಗೊಳಿಸುತ್ತದೆ ಮತ್ತು ಪೂರ್ಣ ಬಜೆಟ್ ಆಗಿರುವ ಎರಡನೇ ಬಜೆಟ್ ಅನ್ನು ಮಂಡಿಸಲು ಆಯ್ಕೆ ಮಾಡಬಹುದು. ಇಡೀ ಹಣಕಾಸು ವರ್ಷಕ್ಕೆ ಸಂಪೂರ್ಣ ಬಜೆಟ್ ಸಿದ್ಧಪಡಿಸಲಾಗುತ್ತದೆ.
10. ಮೊದಲ ಕಾಗದರಹಿತ ಬಜೆಟ್: ಫೆಬ್ರವರಿ 1, 2021 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಕಾಗದರಹಿತ ಬಜೆಟ್ ಅನ್ನು ಮಂಡಿಸಿದರು. ಭಾರತದಲ್ಲಿ ಹರಡಿದ COVID-19 ಸಾಂಕ್ರಾಮಿಕ ರೋಗದ ಕಾರಣದಿಂದ ಹೀಗೆ ಮಾಡಲಾಗಿತ್ತು. ಅವರು ಟ್ಯಾಬ್ಲೆಟ್ ನೋಡಿಕೊಂಡು ಸಂಪೂರ್ಣ ಬಜೆಟ್ ಮಂಡಿಸಿದ್ದರು. ಆ ವರ್ಷ ಬಜೆಟ್ ದಾಖಲೆಗಳ ಸಂಪೂರ್ಣ ಹೋಸ್ಟ್ ಅನ್ನು ಮುದ್ರಿಸುವ ಅಭ್ಯಾಸವನ್ನು ನಿಲ್ಲಿಸಿದರು.
ಇದರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆಯಾಗಿದ್ದಾರೆ. ಅವರು ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1970-71 ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಮೊದಲ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023: ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ 9.4 ಲಕ್ಷ ಕೋಟಿ ಬಡ್ಡಿ ಪಾವತಿ