ದೌಸಾ (ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಅವರು ನಾಡಿದ್ದು (ಫೆ.12) ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮೊದಲು 1 ಸಾವಿರ ಕೆಜಿಗೂ ಅಧಿಕ ಸ್ಫೋಟಕಗಳು, ಡಿಟೋನೇಟರ್ಗಳು, ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸ್ಫೋಟಕಗಳನ್ನು ಅಕ್ರಮ ಗಣಿಗಾರಿಕೆಯ ಬಳಕೆಗಾಗಿ ಸಾಗಿಸಲಾಗುತ್ತಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ದೆಹಲಿ- ಮುಂಬೈ ಎಕ್ಸ್ಪ್ರೆಸ್ ವೇ ಭಾಗವಾದ ದೌಸಾ ಮತ್ತು ಸೋಹ್ನಾ ಮಾರ್ಗದ ಉದ್ಘಾಟನೆಗೆ ಫೆ.12 ರಂದು ನರೇಂದ್ರ ಮೋದಿ ಅವರು ದೌಸಾ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಭದ್ರತಾ ಸಿದ್ಧತೆಗಳನ್ನು ನಡೆಸುತ್ತಿರುವ ಪೊಲೀಸರಿಗೆ ವಾಹನ ತಪಾಸಣಾ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಸ್ಫೋಟಕಗಳು, ಡಿಟೋನೇಟರ್ಗಳು ಮತ್ತು ಇತರ ವಸ್ತುಗಳನ್ನು ವಾಹನದಲ್ಲಿ ಸಾಗಿಸುತ್ತಿರುವುದನ್ನು ಕಂಡುಹಿಡಿದಿದ್ದಾರೆ.
ಸ್ಫೋಟಕಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಗಮನಿಸಿದ ಪೊಲೀಸರು ವಾಹನ ತಡೆದು ತಪಾಸಿಸಿದಾಗ ಸ್ಫೋಟಕ ವಸ್ತುಗಳು ತುಂಬಿದ್ದು ಗೊತ್ತಾಗಿದೆ. ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆದರೆ, ಆತ ಸುಳ್ಳು ಮಾಹಿತಿ ನೀಡಿದ್ದರಿಂದ ಬಂಧಿಸಿದ್ದಾರೆ. ಅಲ್ಲದೇ, ಡಿಟೋನೇಟರ್ಗಳನ್ನು ಸಾಗಿಸಲು ಯಾವುದೇ ಪರವಾನಗಿ ಕೂಡ ಹೊಂದಿರಲಿಲ್ಲ.
ದೌಸಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ಪೂನಿಯಾ ಮಾತನಾಡಿ, "ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ವಾಹನವೊಂದನ್ನು ತಡೆದು ಪರಿಶೀಲಿಸಿದಾಗ ಸ್ಫೋಟಕ ತುಂಬಿದ್ದು ಕಂಡುಬಂತು. 10 ಕ್ವಿಂಟಾಲ್ (1 ಸಾವಿರ ಕೆಜಿ) ಸ್ಫೋಟಕಗಳು, 13 ಪ್ಯಾಕೆಟ್ಗಳಲ್ಲಿ ತುಂಬಿದ 65 ಕೆಜಿ ಎಲೆಕ್ಟ್ರಿಕ್ ಡಿಟೋನೇಟರ್ಗಳು, ಸ್ಫೋಟಿಸಲು ಬಳಸುವ 360 ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಎಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಣೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಅಕ್ರಮ ಕಲ್ಲುಗಣಿಗಾರಿಕೆ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದರು.
"ಬಂಧಿತ ವಾಹನದ ಚಾಲಕ ದೌಸಾದ ವ್ಯಾಸ್ ಮೊಹಲ್ಲಾದ ನಿವಾಸಿ ರಾಜೇಶ್ ಮೀನಾ (57) ಎಂದು ಗುರುತಿಸಲಾಗಿದೆ. ತನಿಖೆಯ ವೇಳೆ ಆತನಿಗೆ ಡಿಟೋನೇಟರ್ಗಳನ್ನು ಸಾಗಿಸಲು ದಾಖಲೆಗಳನ್ನು ಕೇಳಲಾಯಿತು. ಆದರೆ, ಸರಿಯಾದ ದಾಖಲೆಗಳು ಅಥವಾ ಪರವಾನಗಿಯನ್ನು ನೀಡಿಲ್ಲ. ಸ್ಫೋಟಕಗಳು, ಡಿಟೋನೇಟರ್ಗಳು ಮತ್ತು ಇತರ ನಿಷಿದ್ಧ ಸರಕುಗಳನ್ನು ಸಾಗಿಸುವುದು ಅಪಾಯಕಾರಿ. ಹೀಗಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಮುಂಬೈನಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ