ಮುಂಬೈ: ಮುಂಬೈ ಕ್ರೈಂ ಬ್ರ್ಯಾಂಚಿನ ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ ವಝೆ ಅವರನ್ನು ನಾಗರಿಕ ಸೇವಾ ಕೇಂದ್ರಕ್ಕೆ (ಸಿಎಫ್ಸಿ) ವರ್ಗಾವಣೆ ಮಾಡಲಾಗಿದೆ. ಮನ್ಸುಖ್ ಹಿರಾನಿ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಚಿನ್ ವಝೆ ಕೊನೆಗೂ ಕ್ರೈಂ ಬ್ರ್ಯಾಂಚ್ನಿಂದ ಹೊರ ಬಿದ್ದಿದ್ದಾರೆ.
ತನ್ನ ಗಂಡನ ಅನುಮಾನಾಸ್ಪದ ಸಾವಿನಲ್ಲಿ ವಝೆ ಕೈವಾಡವಿದೆ ಎಂದು ಮೃತ ಹಿರಾನಿ ಪತ್ನಿ ಆರೋಪಿಸಿದ್ದರು. ಹೀಗಾಗಿ ಕೊನೆಗೂ ಒತ್ತಡಕ್ಕೆ ಮಣಿದ ಮಹಾರಾಷ್ಟ್ರ ಸರ್ಕಾರ ವಝೆಯನ್ನು ಕ್ರೈಂ ಬ್ರ್ಯಾಂಚಿನಿಂದ ಹೊರ ಹಾಕಿದೆ.
ಪಾಸ್ಪೋರ್ಟ್ಗಳು, ವಿವಿಧ ಪರವಾನಗಿಗಳು ಮತ್ತು ಇತರ ಸಾರ್ವಜನಿಕ ಸಂಬಂಧಿತ ಸೇವೆಗಳಿಗೆ ಅನುಮತಿ ನೀಡುವ ಘಟಕ ಸಿಎಫ್ಸಿ ವಿಭಾಗದಲ್ಲಿ ಇನ್ನು ವಝೆ ಕೆಲಸ ಮಾಡಲಿದ್ದಾರೆ.
ಫೆಬ್ರವರಿ 25 ರಂದು ಸ್ಫೋಟಕಗಳು ತುಂಬಿದ್ದ ಸ್ಕಾರ್ಪಿಯೊ ಎಸ್ಯುವಿ ಕಾರೊಂದು ಉದ್ಯಮಿ ಮುಕೇಶ ಅಂಬಾನಿ ಮನೆಯ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಎಸ್ಯುವಿ ತಮ್ಮ ಒಡೆತನದಲ್ಲಿದ್ದು, ಅದು ಒಂದು ವಾರದ ಹಿಂದೆ ಕಳುವಾಗಿತ್ತು ಎಂದು ಸ್ವತಃ ಹಿರಾನಿ ಹೇಳಿದ್ದರು. ಆದರೆ ಈ ಹಿರಾನಿ ಎಂಬುವರು ಮಾರ್ಚ್ 5 ರಂದು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದಾಗ ಸ್ಫೋಟಕ ತುಂಬಿದ ಕಾರಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿತು.
ಕಳೆದ ನವೆಂಬರ್ ತಿಂಗಳಿನಲ್ಲಿಯೇ ತನ್ನ ಪತಿಯು ಎಸ್ಯುವಿ ಕಾರನ್ನು ಇನ್ಸ್ಪೆಕ್ಟರ್ ವಝೆಗೆ ನೀಡಿದ್ದರೆಂದೂ, ನಂತರ ವಝೆ ಅದನ್ನು ಇದೇ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಮರಳಿಸಿದ್ದರೆಂದು ಹೇಳಿದ್ದರು.
ಸ್ಫೋಟಕ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಟಿಎಸ್ ತಂಡವು ವಝೆಯ ಹೇಳಿಕೆ ಪಡೆದಿದೆ. ಹಿರಾನಿಯ ಕಾರನ್ನು ತಾವು ಬಳಸಿಲ್ಲ ಎಂಬುದಾಗಿ ವಝೆ ಹೇಳಿಕೆ ದಾಖಲಿಸಿದ್ದಾರೆ.
ಅಟೊಮೊಬೈಲ್ ಡೀಲರ್ ಆಗಿದ್ದ ಮನ್ಸುಖ್ ಹಿರಾನಿಯ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆ ಮುಗಿಯುವವರೆಗೂ ಸಚಿನ್ ವಝೆಯನ್ನು ಕ್ರೈಂ ಇಂಟೆಲಿಜೆನ್ಸ್ ಯುನಿಟ್ನಿಂದ ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಮಂತ್ರಿ ಅನಿಲ ದೇಶಮುಖ ಬುಧವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು.