ಬನಸ್ಕಾಂತ(ಗುಜರಾತ್): ಲವ್ ಜಿಹಾದ್ ವಿರುದ್ಧ ಗುಜರಾತ್ನಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಬಂದ್ಗೆ ಕರೆ ನೀಡಿರುವ ಕಾರಣ, ಅನೇಕರು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಮತಾಂತರ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಕಳೆದ ಕೆಲ ತಿಂಗಳ ಅಂತರದಲ್ಲಿ ಮೂರು ಕುಟುಂಬಗಳು ಮತಾಂತರಗೊಂಡಿರುವ ಕಾರಣ ವಿವಿಧ ಸಂಘಟನೆಗಳು ರಸ್ತೆಗಿಳಿದಿವೆ.
ಯಾವ ಕಾರಣಕ್ಕಾಗಿ ಪ್ರತಿಭಟನೆ: ದಿಸಾ ತಾಲೂಕಿನ ರಾಜ್ಪುರ ಗವಾಡಿ ಗ್ರಾಮದ ವ್ಯಕ್ತಿಯೋರ್ವ ಕಾಲೇಜ್ನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಇದರ ಬೆನ್ನಲ್ಲೇ ಹುಡುಗಿಯ ತಾಯಿ ಹಾಗೂ ಸಹೋದರನನ್ನು ಮತಾಂತರಗೊಳಿಸಲಾಗಿತ್ತು. ಜೊತೆಗೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಹೀಗಾಗಿ, ಬಾಲಕಿಯ ತಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸರು ಕೆಲ ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ಇದರ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗ್ತಿದೆ.
ಇದನ್ನೂ ಓದಿ: ತನ್ನ ಹೆಸರು ಬದಲಿಸಿ ಹುಡುಗಿಯ ಮತಾಂತರ ಯತ್ನ: ಯುಪಿಯಲ್ಲಿ ಯುವಕನ ಬಂಧನ
ಗುಜರಾತ್ನ ದಿಶಾ ಗಂಜ್ಬಜಾರ್, ದಿಸಾ ಶೇಕ್ ಮಾರ್ಕೆಟ್ ಮತ್ತು ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ ಸೇರಿ ಅನೇಕ ಸಂಘಟನೆ, ಒಕ್ಕೂಟಗಳು ಬಂದ್ಗೆ ಬೆಂಬಲ ಸೂಚಿಸಿವೆ. ಇದರ ಜೊತೆಗೆ ಜಿಲ್ಲೆಯ ಅನೇಕ ಗ್ರಾಮದ ಜನರು ಭಾಗಿಯಾಗಿದ್ದು, 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ತೆಗೆದುಕೊಂಡು ಬಂದಿದ್ದರು. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದ ಕಾರಣ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡಿರುವ ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಿದ್ದಾರೆ.