ಅಲ್ವಾರ್ (ರಾಜಸ್ಥಾನ): ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು, ಹೋಳಿ ಹಬ್ಬದ ಹಿನ್ನೆಲೆ ಕಾಮಣ್ಣನ ಬದಲು ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ - ಹರಿಯಾಣ ಗಡಿ ಭಾಗವಾದ ಶಹಜಹಾನ್ಪುರದಲ್ಲಿ ಮೂರು ಕೃಷಿ ಕಾಯ್ದೆಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಾವು ಇವುಗಳನ್ನು ದಹಿಸಿ ಸುಗ್ಗಿಯನ್ನು ಸ್ವಾಗತಿಸುತ್ತೇವೆ. ಇದು ನಮ್ಮ ವಿಜಯದ ಸಂಕೇತವಾಗಿದೆ. ನಮ್ಮ ಹೋರಾಟದ ಗೆಲುವಿಗಾಗಿ ಆಶಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಮಧ್ಯೆ 'ಬಣ್ಣಗಳ ಆಟ': 'ಈಟಿವಿ ಭಾರತ' ಸಾರುತ್ತಿದೆ ಜಾಗೃತಿ ಸಂದೇಶ
ಕಳೆದ ನಾಲ್ಕು ತಿಂಗಳಿನಿಂದ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ರೈತರು ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಸುತ್ತು ರೈತ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈವರೆಗೆ 300ಕ್ಕೂ ಹೆಚ್ಚು ರೈತರು ಪ್ರತಿಭಟನೆ ವೇಳೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.