ಮಂಚರ್ಯಾಲ(ತೆಲಂಗಾಣ): ಜಿಲ್ಲೆಯ ಮಂದಮರ್ರಿ ತಾಲೂಕಿನ ವೆಂಕಟಾಪುರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮನೆ ಮಾಲೀಕ ಸೇರಿ ಒಂದೇ ಕುಟುಂಬದ ಆರು ಜನ ಸಜೀವ ದಹನವಾಗಿದ್ದರು. ಇದೀಗ ಈ ಘಟನೆಗೆ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಅವಘಡದಲ್ಲಿ ಮಾಸ ಪದ್ಮಾ (45), ಶಿವಯ್ಯ (50) ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಆಕೆಯ ಇಬ್ಬರು ಮಕ್ಕಳು ಹಾಗೂ ಸಂಬಂಧಿ ಶಾಂತಯ್ಯ ಮೃತಪಟ್ಟಿದ್ದರು. ಶಿವಯ್ಯ ಅವರಿಗೆ ಮೂವರು ಮಕ್ಕಳು. ಅದರಲ್ಲಿ ಒಬ್ಬಾಕೆ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನಿಬ್ಬರು ಮಕ್ಕಳಾದ ಮಗ ನಸ್ಪುರದಲ್ಲೂ ಮತ್ತು ಎರಡನೇ ಮಗಳು ಹೈದರಾಬಾದ್ನಲ್ಲಿ ವಾಸಿಸುತ್ತಿದ್ದಾರೆ.
ವಿವಾಹೇತರ ಸಂಬಂಧ ಕಾರಣ: ಮೌನಿಕಾ ತಮ್ಮ ಚಿಕ್ಕಮ್ಮನ ಮನೆಯಾದ ಗುಡಿಪೆಲ್ಲಿಗೆ ಕೆಲ ದಿನಗಳ ಹಿಂದೆ ಬಂದಿದ್ದರು. ಸಿಂಗರೇಣಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶನಿಗಾರಪು ಶಾಂತಯ್ಯ ಅಲಿಯಾಸ್ ಸತ್ಯಯ್ಯ (57) ಈ ಮನೆಯಲ್ಲೇ ವಾಸವಾಗಿದ್ದರು. ಅವರಿಗೆ ಪದ್ಮಾ ಜೊತೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗ್ತಿದೆ.
ಎಸಿಪಿ ಪ್ರಮೋದ್ ಮಹಾಜನ್ ಪ್ರತಿಕ್ರಿಯೆ: ಕೊಂಡಂಪೇಟೆಯ ನೆಮಲಿಕೊಂಡ ಮೌನಿಕಾ (23) ತನ್ನ ಇಬ್ಬರು ಮಕ್ಕಳಾದ ಪ್ರಶಾಂತಿ (2) ಮತ್ತು ಹಿಮಬಿಂದು (4) ಜತೆ ನಾಲ್ಕು ದಿನಗಳ ಹಿಂದೆ ಚಿಕ್ಕಮ್ಮ ಪದ್ಮಾ ಅವರ ಮನೆಗೆ ಬಂದು ತಂಗಿದ್ದರು. ಶುಕ್ರವಾರ ಮಧ್ಯರಾತ್ರಿ 12:30ರ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರಾದರೂ ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅವರು ಬಂದಾಗ ಮನೆಯಲ್ಲಿದ್ದ ಆರು ಮಂದಿ ಸಜೀವ ದಹನವಾಗಿದ್ದರು.
ಸಣಿಗಾರಪು ಶಾಂತಯ್ಯ ಅವರ ಹುಟ್ಟೂರು ಮಂಚರ್ಯಾಲ ಜಿಲ್ಲೆಯ ಲಕ್ಷೆಟ್ಟಿಪೇಟೆ ಮಂಡಲದ ಉತ್ಕೂರು. ಶ್ರೀರಾಂಪುರ ಭೂಗತ ಗಣಿಯಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಪತ್ನಿ ಸೃಜನಾ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಇಬ್ಬರು ಪುತ್ರರು ವಿದ್ಯಾವಂತರು ಮತ್ತು ನಿರುದ್ಯೋಗಿಗಳು. ಇವರೆಲ್ಲರೂ ಗೋದಾವರಿಯಲ್ಲಿ ನೆಲೆಸಿದ್ದಾರೆ. ಹತ್ತು ವರ್ಷಗಳ ಹಿಂದೆ ಶ್ರೀರಾಂಪುರದ ಸಿಂಗರೇಣಿ ಅಧಿಕಾರಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮಾ ಅವರನ್ನು ಶಾಂತಯ್ಯ ಭೇಟಿಯಾಗಿದ್ದರು ಎನ್ನಲಾಗ್ತಿದೆ. ಇದು ಅವರ ವಿವಾಹೇತರ ಸಂಬಂಧಕ್ಕೆ ಕಾರಣವಾಗಿತ್ತು.
ಶಾಂತಯ್ಯ ಮತ್ತು ಸೃಜನಾ ನಡುವೆ ಜಗಳ: ಅಷ್ಟೇ ಅಲ್ಲದೇ ಕೆಲ ದಿನಗಳವರೆಗೆ ಆಕೆಯೊಂದಿಗೆ ಶಾಂತಯ್ಯ ಇದ್ದ ಎನ್ನಲಾಗ್ತಿದೆ. ಈ ವಿಚಾರವಾಗಿ ಶಾಂತಯ್ಯ ಹಾಗೂ ಆತನ ಪತ್ನಿ ಸೃಜನಾ ನಡುವೆ ಜಗಳವಾಗಿದೆ. ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರಾದರೂ ಸಮಸ್ಯೆ ಬಗೆಹರಿದಿರಲಿಲ್ಲ. ಸೃಜನಾ ಕೂಡ ಕೆಲ ದಿನಗಳಿಂದ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ವರದಿಯಾಗಿದೆ.
ಶಾಂತಯ್ಯ ನಿವೃತ್ತಿಗೆ ಎರಡು ವರ್ಷ ಬಾಕಿ ಇದ್ದು, ಈತ ಎಲ್ಲಾ ಹಣವನ್ನು ಪದ್ಮಾಗೆ ನೀಡುತ್ತಿದ್ದ ಎಂಬ ಕಾರಣಕ್ಕೆ ಆತನ ಹೆಂಡತಿ ಮಕ್ಕಳು ಜಗಳ ಆಡಿದ್ದರಂತೆ. ಅಲ್ಲದೇ 25 ಲಕ್ಷ ರೂ.ಗಳನ್ನು ನೀಡಿರುವ ಶಂಕೆ ವ್ಯಕ್ತವಾಗಿದ್ದರಿಂದ ಕುಟುಂಬಸ್ಥರು ಆತನ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮನೆಗೆ ಆಕಸ್ಮಿಕ ಬೆಂಕಿ.. ಮಕ್ಕಳು, ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಜನ ಸಜೀವ ದಹನ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಂತಯ್ಯ ಅವರ ಮೇಲೆ ಆರು ತಿಂಗಳ ಹಿಂದೆ ಒಂದು ಬಾರಿ ಹಾಗೂ ಮೂರು ತಿಂಗಳ ಹಿಂದೆ ಮತ್ತೊಮ್ಮೆ ಕೊಲೆ ಯತ್ನಗಳು ನಡೆದಿದ್ದವು. ಅಪಹರಣವೂ ನಡೆದಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಶಾಂತಯ್ಯ ಸಹವಾಸ ಮಾಡುತ್ತಿದ್ದ ಮಹಿಳೆ ಪದ್ಮಾ ಕುಟುಂಬವನ್ನು ಕೊಲೆ ಮಾಡಲು ಸೃಜನಾ ಸೂಚನೆ ನೀಡಿದ ಹಿನ್ನೆಲೆ ಆಕೆಯ ಪ್ರಿಯಕರ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೆಟ್ರೋಲ್ ಕ್ಯಾನ್ಗಳು ಪತ್ತೆ: ಪದ್ಮಾ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಘಟನೆ ನಡೆದ ಮನೆಯ ಹಿಂಭಾಗದಲ್ಲಿ ಟೈರ್ಗಳು ಅರ್ಧ ಸುಟ್ಟಿದ್ದವು. ಅವುಗಳಿಂದ ಸ್ವಲ್ಪ ದೂರದಲ್ಲಿ 20 ಲೀಟರ್ನ ಎರಡು ಪೆಟ್ರೋಲ್ ಕ್ಯಾನ್ಗಳಿದ್ದವು. ಇದರಿಂದ ಆರೋಪಿಗಳು ಮನೆಯ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಬೆಂಕಿ ತಗುಲಿದರೂ ಮನೆಯಿಂದ ಕೂಗಾಡುವ ಸದ್ದು ಕೇಳಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದರಿಂದ, ಅವರೆಲ್ಲಾ ಪಾನಮತ್ತರಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇಲ್ಲವೇ ಪ್ಲಾನ್ ಪ್ರಕಾರ ಮಾದಕ ದ್ರವ್ಯ ನೀಡಿ ಅಥವಾ ಮೊದಲೇ ಕೊಂದು ಸುಟ್ಟು ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.