ಹೈದರಾಬಾದ್: ರಾಜಾ ಸಿಂಗ್ ವಿವಾದಿತ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ 127 ಯುವಕರನ್ನು ರಾತ್ರಿ 3 ಗಂಟೆಗೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಹೈದರಾಬಾದ್ ಹಳೆ ನಗರವನ್ನು ಪೊಲೀಸರು ಸಂಪೂರ್ಣವಾಗಿ ಹತೋಟಿಗೆ ತೆಗದುಕೊಂಡಿದ್ದು, ನಗರದಲ್ಲಿ ಕರ್ಫ್ಯೂ ವಾತಾವರಣವಿದೆ. ಪ್ರಕ್ಷುಬ್ಧ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಗಿದ್ದು, ಮೀರ್ ಚೌಕ್, ಚಾರ್ಮಿನಾರ್ ಮತ್ತು ಗೋಶಾಮಹಲ್ನಲ್ಲಿ ಒಟ್ಟು 360 ಆರ್ಪಿಎಫ್ ಪಡೆಗಳು ಕರ್ತವ್ಯ ನಿರ್ವಹಿಸುತ್ತಿವೆ.
ಚಾಂದ್ರಾಯನ ಗುಟ್ಟಾ, ಚಾರ್ಮಿನಾರ್, ಯಾಕುತ್ಪುರ, ಬಹದ್ದೂರ್ಪುರ, ಫಲಕ್ ನುಮಾ, ಶಾಲಿಬಂಡಾ ಮತ್ತು ಮೊಘಲ್ಪುರ, ತಲಾಬ್ ಕಟ್ಟಾ, ಮತ್ತು ರೀನ್ಬಜಾರ್ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬುಧವಾರ ರಾತ್ರಿ 8 ಗಂಟೆಯ ಮೊದಲೇ ಮುಚ್ಚಿಸಿದ್ದಾರೆ. ರಾತ್ರಿ ಹೊತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರು ಹಾಗೂ ಪಾದಚಾರಿಗಳನ್ನೂ ಸಹ ಪೊಲೀಸರು ರಾತ್ರಿಗಸ್ತು ವೇಳೆ ಮನೆಗೆ ಕಳುಹಿಸಿದ್ದಾರೆ. ಹೆಚ್ಚುವರಿ ಸಿಪಿ ಮಟ್ಟದ ಅಧಿಕಾರಿ ನಿಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಹಳೆಯ ನಗರದಲ್ಲಿ ಆರ್ಪಿಎಫ್ ಪಡೆಗಳು ಧ್ವಜ ಮೆರವಣಿಗೆ ನಡೆಸಿದ್ದು, ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಕೆಲವು ಪ್ರತಿಭಟನಾಕಾರರು ಮಧ್ಯರಾತ್ರಿ ರಸ್ತೆಗಿಳಿದಿದ್ದರು. ಶಾಲಿಬಂಡಾ ಮತ್ತು ಸೈದಾಬಾದ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಾಜಾ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುವ ಸೂಚನೆ ದೊರೆತ ಪೊಲೀಸರು ಯುವಕರನ್ನು ಸ್ಥಳದಿಂದ ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಮೊಘಲ್ಪುರದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.
ಶಾಂತಿಯುತ ವಾತಾವರಣ ಇದ್ದ ಕಾರಣ ಶಾಲಿ ಬಂಡಾದಿಂದ ವಿಶೇಷ ಪಡೆಗಳನ್ನು ವಾಪಸ್ ಕರೆಸಲಾಯಿತು. ಸದ್ಯ ಅಲ್ಲಿ ಸಾಮಾನ್ಯ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಜಾ ಸಿಂಗ್ ಶಿರಚ್ಚೇದಕ್ಕೆ ಕರೆ