ಅಲಿಗಢ (ಉತ್ತರ ಪ್ರದೇಶ): ಇಲ್ಲಿನ ಶಾಲೆಯೊಂದರ ಪ್ರಾಂಶುಪಾಲರು, ''ಹಿಂದೂ ದೇವಾಲಯಗಳಲ್ಲಿ ಪ್ರಾರ್ಥನೆ ಮತ್ತು ನೈವೇದ್ಯಗಳನ್ನು ಅರ್ಪಿಸುವುದನ್ನು ಬೂಟಾಟಿಕೆ'' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಮಂಗಳವಾರ ಹಿಂದೂ ಯುವವಾಹಿನಿ ಸಂಘಟನೆಯ ಮುಖಂಡರು, ಸಾಸ್ನಿ ಗೇಟ್ ಪ್ರದೇಶದಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಮುದ್ರಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಪ್ರಾಂಶುಪಾಲರು ಹಿಂದೂ ಧರ್ಮದ ಆತ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಯುವವಾಹಿನಿ ಹೇಳಿದೆ. ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಆಗ್ರಾ ರಸ್ತೆಯಲ್ಲಿರುವ ಶಾಲೆಯ ಸಂಸ್ಥಾಪಕರ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಿಂದೂ ಧರ್ಮದಲ್ಲಿನ ಪೂಜೆ ಹಾಗೂ ನೈವೇದ್ಯಗಳನ್ನು ಬೂಟಾಟಿಕೆ ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ಶ್ರೀಕೃಷ್ಣನ ಕುರಿತು ಗೋವರ್ಧನ ಪರ್ವತವನ್ನು ಬೆರಳು ತುದಿಯಲ್ಲಿ ಹಿಡಿದಿರುವುದು ಸುಳ್ಳಾಗಿದ್ದು, ಇಂತಹ ವಿಷಯಗಳ ಮೂಲಕ ಹಿಂದೂ ಧರ್ಮವು ಕೇವಲ ಬೂಟಾಟಿಕೆಯನ್ನು ಹಬ್ಬಿಸುತ್ತದೆ. ಶ್ರೀಕೃಷ್ಣನಂಥ ಅವತಾರ ಈ ಭೂಮಿಯ ಮೇಲೆ ನಡೆದಿಲ್ಲ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಎಂಬ ಆರೋಪವೂ ಪ್ರಾಂಶುಪಾಲರ ಮೇಲಿದೆ.
ಹಿಂದೂ ಯುವ ವಾಹಿನಿಯ ಧಾರ್ಮಿಕ ಪ್ರಚಾರಕ ಗರಂ: ಪೂಜಿಸುವುದು ಕೇವಲ ಬೂಟಾಟಿಕೆ. ಶ್ರೀಕೃಷ್ಣನ ಬಗ್ಗೆ ಹೇಳಿರುವ ಮಾತುಗಳು ಜನರನ್ನು ಮೂರ್ಖರನ್ನಾಗಿಸುವಂಥದ್ದು, ಸನಾತನ ಧರ್ಮಕ್ಕೆ ಅಪಮಾನ ಮಾಡಿರುವಂತಹ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ ಎಂದು ಹಿಂದೂ ಯುವ ವಾಹಿನಿಯ ಧಾರ್ಮಿಕ ಪ್ರಚಾರಕ ವಿವೇಕ್ ಕುಮಾರ್ ಶರ್ಮಾ ಕಿಡಿಕಾರಿದ್ದಾರೆ.
ಪೂಜೆ, ಪುನಸ್ಕಾರ ಮತ್ತು ದೇವಾಲಯಗಳಲ್ಲಿ ನೀಡಲಾಗುವ ಪ್ರಸಾದ ಇದು ಬೂಟಾಟಿಕೆ. ಭಗವಾನ್ ಶ್ರೀ ಕೃಷ್ಣನ ಮೇಲೂ ಪ್ರಶ್ನೆ ಮಾಡಿದ್ದಾರೆ. ಶ್ರೀಕೃಷ್ಣನ ಅವತಾರದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ ಎಂದಿದ್ದಾರೆ. ಇದು ನಮ್ಮ ಸನಾತನ ಮತ್ತು ಆರಾಧ್ಯ ಭಗವಾನ್ ಶ್ರೀಕೃಷ್ಣನ ನಂಬಿಕೆಯ ಮೇಲಿನ ದಾಳಿಯಾಗಿದೆ. ಪ್ರಾಂಶುಪಾಲರೊಬ್ಬರು ಸನಾತನ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ವಿವೇಕ್ ಕುಮಾರ್ ಶರ್ಮಾ ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಹಿಂದೂ ಯುವ ವಾಹಿನಿ ಹಾಗೂ ಇತರ ಸಂಘಟನೆಗಳು ಸನಾತನ ಸಂಸ್ಕೃತಿ ಪರವಾಗಿ ಧ್ವನಿ ಎತ್ತಲಿವೆ. ಸನಾತನ ಸಂಸ್ಥೆಯನ್ನು ಅವಮಾನಿಸುವವರು ಅನೀತಿವಂತರು ಮತ್ತು ಹಿಂದೂ ಧರ್ಮದ ಜನರು ಅವಮಾನಗಳನ್ನು ಸಹಿಸುವುದಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: "ಚೀನಾವನ್ನ ಎಂದಿಗೂ ನಂಬಲು ಸಾಧ್ಯವಿಲ್ಲ": ಡ್ರ್ಯಾಗನ್ ವಿಸ್ತರಣಾ ನೀತಿ ಖಂಡಿಸಿದ ಟಿಬೆಟಿಯನ್ ಸಂಸದ