ಜೈಪುರ(ರಾಜಸ್ಥಾನ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬೆಡ್ ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದರ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬ ಭಾವನಾತ್ಮಕ ಮನವಿ ಮಾಡಿದ್ದಾರೆ.
ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ಭಾವನಾತ್ಮಕ ವಿಡಿಯೋ ರಿಲೀಸ್ ಮಾಡಿದ್ದು, ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಸೋಂಕಿಗೊಳಗಾಗಿ ಏಪ್ರಿಲ್ 5 ರಿಂದ ಚಿಕಿತ್ಸೆ ಪಡೆಯುತ್ತಿರುವ ಇನ್ಸ್ಪೆಕ್ಟರ್ ಖಲೀಲ್ ಅಹ್ಮದ್ ಖಿಲ್ಜಿ ಆಸ್ಪತ್ರೆಯ ಹಾಸಿಗೆಯಿಂದ ಭಾವನಾತ್ಮಕ ವಿಡಿಯೋ ರಿಲೀಸ್ ಮಾಡಿದ್ದು, ಕೋವಿಡ್ನ ಎಲ್ಲ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಆಕ್ಸಿಜನ್ ಮಟ್ಟ ಶೇ.90ರಷ್ಟಿದ್ದು, ಶ್ವಾಸಕೋಸಕ್ಕೆ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಚೇತರಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ: ಯುನಿವರ್ಸಲ್ 'ವ್ಯಾಕ್ಸಿನೇಷನ್ ನೀತಿ ಟೊಳ್ಳು ಎಂದ ದೀದಿ
ಯಾವುದೇ ಕಾರಣಕ್ಕೂ ಕೋವಿಡ್ ಪರಿಸ್ಥಿತಿ ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿರುವ ಅವರು, ಸಾಮಾಜಿಕ ಅಂತರ, ನಿಯಮಿತವಾಗಿ ಕೈತೊಳೆಯುವುದು, ಮಾಸ್ಕ್ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಇನ್ಸ್ಪೆಕ್ಟರ್ ಖಿಲ್ಜಿ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. 2020ರಲ್ಲಿ ರಾಜಸ್ಥಾನದಲ್ಲಿ 4 ಸಾವಿರಕ್ಕೂ ಹೆಚ್ಚು ಪೊಲೀಸರು ಕೋವಿಡ್ ಸೋಂಕಿಗೊಳಗಾಗಿದ್ದು, 21 ಜನರು ಸಾವನ್ನಪ್ಪಿದ್ದಾರೆ.