ಪಿಲಿಭಿತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಮಾನಗೇಡಿ ಕೃತ್ಯ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಕಾಲೇಜು ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸ್ ಸಮವಸ್ತ್ರದಲ್ಲೇ ಆರೋಪಿ ಈ ದುಷ್ಕೃತ್ಯ ಎಸಗಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸಂತ್ರಸ್ತೆಯ ಲಗೇಜ್ಗಳನ್ನು ರೈಲಿನಿಂದ ಹೊರಗೆ ಎಸೆದು ಓಡಿ ಹೋಗಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಕಾನ್ಸ್ಟೇಬಲ್ನನ್ನು ಪೊಲೀಸರು ಪತ್ತೆ ಹೆಚ್ಚಿ ಶುಕ್ರವಾರ ಬಂಧಿಸಿದ್ದಾರೆ.
ಕಾನ್ಸ್ಟೇಬಲ್ ತೌಫಿಕ್ ಅಹ್ಮದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಉತ್ತರ ಪ್ರದೇಶದ ಬರೇಲಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತ್ರಿವೇಣಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಈ ಕಾನ್ಸ್ಟೇಬಲ್ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಬರೇಲಿ ಜಿಆರ್ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿನಲ್ಲಿ ನಡೆದಿದ್ದೇನು?: ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಬಿಎ ಓದುತ್ತಿದ್ದ ವಿದ್ಯಾರ್ಥಿನಿ ರಜೆಯ ಮೇಲೆ ಮನೆಗೆ ಹೋಗುತ್ತಿದ್ದರು. ಪ್ರಯಾಗರಾಜ್ನಿಂದ ಪಿಲಿಭಿತ್ಗೆ ತ್ರಿವೇಣಿ ಎಕ್ಸ್ಪ್ರೆಸ್ ರೈಲಿನ ಎಸ್7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಬರೇಲಿ ಜಂಕ್ಷನ್ನಲ್ಲಿ ರೈಲು ನಿಂತಾಗ ಬಹಳಷ್ಟು ಪ್ರಯಾಣಿಕರು ಕೆಳಗಿಳಿದು ಹೋಗಿದ್ದಾರೆ. ಇದರಿಂದ ಕಂಪಾರ್ಟ್ಮೆಂಟ್ ಸಂಪೂರ್ಣ ಖಾಲಿಯಾಗಿ ವಿದ್ಯಾರ್ಥಿನಿ ಒಬ್ಬರೇ ಉಳಿದಿದ್ದರು.
ಇದನ್ನೂ ಓದಿ: ಹನಿಟ್ರ್ಯಾಪ್ಗೆ ನಲುಗಿ, ಹೆಂಡ್ತಿಯ ಒಡವೆ ಮಾರಿ ಹಣ ಕೊಟ್ಟಿದ್ದ ವ್ಯಕ್ತಿ.. ಪೊಲೀಸರ ಸಹಾಯದಿಂದ ನಿಟ್ಟುಸಿರು ಬಿಟ್ಟ ವಿವಾಹಿತ