ನವದೆಹಲಿ: ಪಂಜಾಬ್ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿಗಳ ಜೊತೆ ಇಂದು ಉತ್ತರ ಪ್ರದೇಶದ ಲಖಿಂಪುರಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡುವುದಾಗಿ ಧೈರ್ಯ ತುಂಬುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
'ಇಬ್ಬರು ಮುಖ್ಯಮಂತ್ರಿಗಳ ಜೊತೆ ನಾವು ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೇವೆ. ಇದೇ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಬೆಂಬಲ ಸೂಚಿಸುತ್ತೇವೆ. ಈಗಾಗಲೇ ಸೀತಾಪುರದಲ್ಲಿ ಪ್ರಿಯಾಂಕಾ ಅವರನ್ನು ಬಂಧಿಸಿಟ್ಟಿದ್ದಾರೆ. ಇದು ರೈತರಿಗೆ ಸಂಬಂಧಿಸಿದ ವಿಚಾರವಾಗಿದ್ದು ನಮ್ಮ ಹೋರಾಟ ಅನಿವಾರ್ಯ' ಎಂದು ಅವರು ಹೇಳಿದರು.
'ಲಖಿಂಪುರದಲ್ಲಿ ರೈತರ ಮೇಲೆ ಜೀಪ್ ಹರಿಸಿ ಕೊಂದಿದ್ದಾರೆ. ಇದೊಂದು ಕೊಲೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವರು ಹಾಗು ಅವರ ಪುತ್ರನ ಹೆಸರು ಕೇಳಿಬಂದಿದೆ. ನಿನ್ನೆ ಪ್ರಧಾನಿ ಮೋದಿ ಲಕ್ನೋದಲ್ಲಿದ್ದರೂ ಲಖಿಂಪುರ ಖೇರಿಗೆ ಹೋಗಲಿಲ್ಲ. ರೈತರ ವಿರುದ್ಧ ನಡೆದ ವ್ಯವಸ್ಥಿತ ದಾಳಿ' ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು.
'ಭಾರತದಲ್ಲಿ ಈಗ ಸರ್ವಾಧಿಕಾರವಿದೆ'
ಈ ಹಿಂದೆ ದೇಶದಲ್ಲಿ ಪ್ರಜಾಪ್ರಭುತ್ವ ಇತ್ತು. ಆದರೆ ಈಗ ಸರ್ವಾಧಿಕಾರವಿದೆ. ರಾಜಕಾರಣಿಗಳು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಿಂದೂಸ್ತಾನದ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Congress leader Rahul Gandhi on Lakhimpur Kheri violence](https://etvbharatimages.akamaized.net/etvbharat/prod-images/13274075_aaa.jpg)
ಮಾಧ್ಯಮದವರ ಮೇಲೆ ರಾಹುಲ್ ಅಸಮಾಧಾನ
'ನಾವು ಈ ಬಗ್ಗೆ ಪ್ರಶ್ನಿಸಿದಾಗ ನೀವದನ್ನು ರಾಜಕೀಯ ಮಾಡುತ್ತಿದ್ದೀರಿ ಎಂದು ಹೇಳುತ್ತೀರಿ. ಈ ಘಟನೆಯನ್ನು ಜನರಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿ' ಎಂದು ಮಾಧ್ಯಮದವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲಖಿಂಪುರಕ್ಕೆ ತೆರಳಲು ರಾಹುಲ್ ಗಾಂಧಿ ನಿಯೋಗಕ್ಕೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ