ನವದೆಹಲಿ: ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನುಗಳನ್ನು ತರಬೇಕು ಎಂದು ವಿಶ್ವ ಹಿಂದೂ ಪರಿಷತ್(VHP) ಸರ್ಕಾರಕ್ಕೆ ತನ್ನ ಬೇಡಿಕೆ ಪುನರುಚ್ಚರಿಸಿದೆ. ಪಂಜಾಬ್ನ ಕೆಲವು ಜಿಲ್ಲೆಗಳಾದ ಅಮೃತಸರ, ಗುರುದಾಸ್ಪುರ್ ಮತ್ತು ಫಿರೋಜ್ಪುರದಲ್ಲಿ ಕಳೆದೆರಡು ವರ್ಷಗಳಲ್ಲಿ ಮತಾಂತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಬಗ್ಗೆ ವರದಿ ಬಂದ ನಂತರ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತಾಂತರದ ವಿರುದ್ಧ ಆಂದೋಲನ:
ಈಟಿವಿ ಭಾರತದೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ಸಂಘಟನೆ(ವಿಹೆಚ್ಪಿ) ಪರಿಸ್ಥಿತಿ ಅರಿತುಕೊಂಡಿದೆ. ಹಾಗಾಗಿ ನಮ್ಮ ಸಂಘಟನೆ ಸ್ಥಳೀಯ ಘಟಕಗಳು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಡೆಯಲು ಈಗಾಗಲೇ ಸಕ್ರಿಯವಾಗಿವೆ ಎಂದು ಹೇಳಿದರು.
ಹಣ, ಉದ್ಯೋಗ, ಮದುವೆಯ ಆಮಿಷವೊಡ್ಡಿ ಅಮಾಯಕ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಆಂದೋಲನ ನಡೆಸುತ್ತಿದ್ದೇವೆ. ಕ್ರಿಶ್ಚಿಯನ್ ಮಿಷನರಿಗಳು ಬಹಳ ಹಿಂದಿನಿಂದಲೂ ಇದನ್ನು ಮಾಡುತ್ತಾ ಬಂದಿವೆ. ಮತ್ತು ಅವರು ವಿಶೇಷವಾಗಿ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಬೆಳೆಯುತ್ತಿದ್ದಾರೆ ಎಂದು ವಿನೋದ್ ಬನ್ಸಾಲ್ ಆರೋಪಿಸಿದ್ದಾರೆ.
ಆರ್ಎಸ್ಎಸ್, ವಿಹೆಚ್ಪಿಗಳಿಂದಲೂ ಸಾಮಾಜಿಕ ಸೇವೆ:
ಕೇವಲ ಮಿಷನರಿಗಳು ಮಾತ್ರ ಸಾಮಾಜಿಕ ಸೇವೆಗಳನ್ನು ಮಾಡುತ್ತಿಲ್ಲ. ಆರ್ಎಸ್ಎಸ್ ಮತ್ತು ವಿಹೆಚ್ಪಿ ಸಂಘಟನೆಗಳು ಹಲವು ವರ್ಷಗಳಿಂದ ಜನರ ಸೇವೆ ಮಾಡುತ್ತಿವೆ. ಸರ್ಕಾರದ ಸೌಲಭ್ಯ ತಲುಪಲು ಸಾಧ್ಯವಾಗದ ಬುಡಕಟ್ಟು ಪ್ರದೇಶಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ನಮ್ಮ ಉದ್ದೇಶ ಕೇವಲ ಜನ ಸೇವೆ:
ಸಮಾಜ ಸೇವೆಯ ವಿಚಾರದಲ್ಲಿ ಮಿಷನರಿಗಳು ನಮ್ಮ ಮುಂದೆ ನಿಲ್ಲುವುದಿಲ್ಲ. ಒಂದೇ ವ್ಯತ್ಯಾಸವೆಂದರೆ ಅವರು ಮತಾಂತರದ ಉದ್ದೇಶದಿಂದ ಮಾಡುತ್ತಾರೆ. ಆದರೆ, ನಮ್ಮ ಉದ್ದೇಶ ಕೇವಲ ಜನ ಸೇವೆ. ಮತಾಂತರ ರಾಷ್ಟ್ರದ ವಿರುದ್ಧದ ಪಿತೂರಿ ಎಂದು ಬನ್ಸಾಲ್ ಹೇಳಿದರು.
ಸಾಮೂಹಿಕ ಮತಾಂತರ ತಡೆಯಲು ಪ್ರತಿತಂತ್ರ:
ವಿಹೆಚ್ಪಿ ಮತ್ತು ಆರ್ಎಸ್ಎಸ್ನಂತಹ ಸಂಘಟನೆಗಳು ಹಿಂದೂಗಳ ಸಾಮೂಹಿಕ ಮತಾಂತರವನ್ನು ತಡೆಯಲು ಪ್ರತಿತಂತ್ರ ರೂಪಿಸುತ್ತಿವೆ. ಜಾಗೃತಿ ಅಭಿಯಾನಗಳ ಮೂಲಕ, ಅವರು ತಮ್ಮ ಮೂಲ ಧರ್ಮದಲ್ಲಿ ಉಳಿಯಲು ಹಾಗೂ ಬಲವಂತವಾಗಿ ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರಳಲು ಮನವಿ ಮಾಡುತ್ತಿದ್ದಾರೆ. ಜತೆಗೆ ದೇಶಾದ್ಯಂತ ಹರಡಿರುವ ಮತಾಂತರ ದಂಧೆ ವಿರುದ್ಧ ಜಾಗೃತಿ ಮೂಡಿಸಲು 10 ದಿನಗಳ ಸುದೀರ್ಘ ಅಭಿಯಾನ ನಡೆಸಿವೆ.
ಏಕಕಾಲದಲ್ಲಿ ಎರಡು ಕೆಲಸ:
ನಾವು ಏಕಕಾಲದಲ್ಲಿ ಎರಡು ಕೆಲಸ ಮಾಡುತ್ತಿದ್ದೇವೆ.
- ಒಂದು ಮತಾಂತರಗೊಳ್ಳುತ್ತಿರುವವರನ್ನು ನಿಲ್ಲಿಸುವುದು
- ಮತ್ತು ಎರಡನೆಯದು ಮತಾಂತರಗೊಂಡವರನ್ನು ಮರಳಿ ಕರೆತರುವುದು.
ಮತಾಂತರಗೊಂಡವರನ್ನು 'ಘರ್ ವಾಪಸ್'ಗಾಗಿ ಮನವರಿಕೆ ಮಾಡುತ್ತೇವೆ. ಜತೆಗೆ ಅವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡುತ್ತೇವೆ. ಪಂಜಾಬ್ನ ಶ್ರೀಮಂತ ಸಂಸ್ಕೃತಿ ಉಳಿಸಲು ಜತೆಗೆ ಇಂತಹ ಮಿಷನರಿಗಳ ಬಲೆಗೆ ಬೀಳದಂತೆ ನಾನು ಪಂಜಾಬ್ನ ಜನರಿಗೆ ಮನವಿ ಮಾಡುತ್ತೇನೆ ಎಂದು ಬನ್ಸಾಲ್ ಹೇಳಿದರು.
ಇನ್ನು ಇಂತಹ ದೊಡ್ಡ ಪ್ರಮಾಣದ ಮತಾಂತರ ದಂಧೆ ನಡೆಸಲು, ಮಿಷನರಿಗಳಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ. ಅದಕ್ಕಾಗಿ ಮಿಷನರಿಗಳು ಎಫ್ಸಿಆರ್ಎ(ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ)ಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಜತೆಗೆ ವಿದೇಶಗಳಿಂದಲೂ ಹಣ ಪಡೆಯುತ್ತಿವೆ ಎಂದು ವಿಹೆಚ್ಪಿ ವಕ್ತಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: Jammu Encounter: ಮೂವರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ