ನಿವಾರಿ(ಮಧ್ಯಪ್ರದೇಶ): ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಅ. 4ರಂದು 3 ವರ್ಷದ ಮಗು ಪ್ರಹ್ಲಾದ್ ತೆರೆದ ಕೊಳವೆಬಾವಿ ಬಿದ್ದಿದ್ದ. ಪ್ರಹ್ಲಾದ್ ರಕ್ಷಣೆಗೆ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ಭರದಿಂದ ಸಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.
ಬುಧವಾರ ಬೆಳಗ್ಗೆ ಬೋರ್ವೆಲ್ನಲ್ಲಿ ಬಿದ್ದ ಮಗುವನ್ನು ಸತತ ಕಾರ್ಯಾಚರಣೆ ಬಳಿಕ ಭಾನುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಹೊರತೆಗೆಯಲಾಗಿತ್ತು. ನಂತರ ನಿವಾರಿಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವೆಂಬಂತೆ ಸತತ ಕಾರ್ಯಾಚರಣೆ ಫಲಿಸಲಿಲ್ಲ, ಮಗು ಪ್ರಹ್ಲಾದ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಸುಮಾರು 90 ಗಂಟೆಗಳ ಪರಿಶ್ರಮದ ನಂತರ ಸಿಬ್ಬಂದಿ ಮಗುವನ್ನು ಹೊರ ತೆಗೆದಿದ್ದರು. ಮಗು ಪ್ರಹ್ಲಾದ್ ಬದುಕಿ ಬರಲೆಂದು ಎಲ್ಲೆಡೆ ಪ್ರಾರ್ಥಿಸಲಾಗಿತ್ತು. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮಗುವನ್ನು ರಕ್ಷಣೆ ಮಾಡುವ ವಿಶ್ವಾಸವಿದೆ. ದೇವರು ಮಗುವಿಗೆ ದೀರ್ಘಾಯುಷ್ಯ ನೀಡಲಿ. ಎಲ್ಲರೂ ಮಗುವಿಗಾಗಿ ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದರು.