ಅಮರಾವತಿ : ಟಿಡಿಪಿ ಅಧಿಕಾರಿಗಳು ಮತ್ತು ನಾಯಕರ ನಿವಾಸಗಳ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಆ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು 36 ಗಂಟೆಗಳ ಪ್ರತಿಭಟನೆ ಘೋಷಿಸಿದ್ದಾರೆ. ನಾಯ್ಡು ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರತಿಭಟನೆಯನ್ನು ಆರಂಭಿಸಲಿದ್ದು, ಶುಕ್ರವಾರ ರಾತ್ರಿ 8 ಗಂಟೆಗೆ ಕೊನೆಗೊಳ್ಳಲಿದೆ.
ತಮ್ಮ ಪಕ್ಷದ ಕಚೇರಿ, ನಾಯಕರ ಮೇಲಿನ ದಾಳಿಯನ್ನು 'ರಾಜ್ಯ ಪ್ರಾಯೋಜಿತ ಭಯೋತ್ಪಾದನೆ' ಎಂದು ಕರೆದಿರುವ ನಾಯ್ಡು, ಸರ್ಕಾರವು ಗುಂಪುಗಾರಿಕೆಗೆ ಉತ್ತೇಜನ ನೀಡುತ್ತಿದೆ ಎಂದು ಟೀಕಿಸಿದ್ದಾರೆ. ಇದರಲ್ಲಿ ಪೊಲೀಸರು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಳಾಗಿದೆ ಎಂದು ಟೀಕಿಸಿರುವ ಅವರು, ಮುಖ್ಯಮಂತ್ರಿ ಜಗನ್ ಮತ್ತು ಡಿಜಿಪಿ ಅವರು ವಿರೋಧ ಪಕ್ಷದ ನಾಯಕರ ಮೇಲೆ ದೈಹಿಕ ದಾಳಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದಿದ್ದಾರೆ.
ರಾಜ್ಯ ಸರ್ಕಾರದ ದಬ್ಬಾಳಿಕೆಯ ವಿರುದ್ಧ ಹೋರಾಡಲು ಜನರು, ಇತರ ಪಕ್ಷಗಳು ಹಾಗೂ ನಾಗರಿಕ ಸಮಾಜ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಅ.22ಕ್ಕೆ ಅಪಾಯಿಂಟ್ಮೆಂಟ್ ಕೋರಿದ್ದಾರೆ.
ಸಿಐ ನಾರಾ ಲೋಕೇಶ್ ವಿರುದ್ಧ ಪ್ರಕರಣ ದಾಖಲು
ನಿನ್ನೆ ಟಿಡಿಪಿ ಕಚೇರಿಗೆ ಭೇಟಿ ನೀಡಿದ್ದ ಸರ್ಕಲ್ ಇನ್ಸ್ಪೆಕ್ಟರ್(ಸಿಐ) ನಾಯಕ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಇತರ ಮೂವರು ಆರೋಪಿಗಳಾದ ಅಶೋಕ್ ಬಾಬು, ಆಲಪತಿ ರಾಜ ಮತ್ತು ತೆನಾಲಿ ಶ್ರವಣ್ ಕುಮಾರ್ ವಿರುದ್ಧವೂ ಕೇಸ್ ದಾಖಲಾಗಿದೆ.