ಪಾಟ್ನಾ : ದೇಶಾದ್ಯಂತ ಕೋವಿಡ್ ಎರಡನೇ ಅಲೆ ಜೋರಾಗಿದ್ದ ಸಮಯ ಅನೇಕ ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿದ್ದವು. ಹೀಗಾಗಿ, ವಿವಿಧ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರು ತಮ್ಮ ಮನೆಗೆ ತೆರಳಿದ್ದರು. ಸದ್ಯ ಕೋವಿಡ್ ಸೋಂಕು ಕಡಿಮೆಯಾಗ್ತಿದ್ದಂತೆ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ವಲಸೆ ಕಾರ್ಮಿಕರು ಮತ್ತೆ ಕೂಲಿ ಹುಡುಕಿಕೊಂಡು ವಿವಿಧ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

ಎರಡನೇ ಹಂತದ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಕೂಲಿ ಕಾರ್ಮಿಕರಿಗೆ ರಾಜ್ಯದಲ್ಲೇ ಕೆಲಸ ನೀಡಲಾಗುವುದು ಎಂದು ಬಿಹಾರ ಸರ್ಕಾರ ಘೋಷಣೆ ಮಾಡಿತು. ಆದರೆ, ಈ ಭರವಸೆ ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಹೀಗಾಗಿ, ಬಿಹಾರದ ಸಾವಿರಾರು ಕೂಲಿ ಕಾರ್ಮಿಕರು ಇದೀಗ ರೈಲು ಹತ್ತಿಕೊಂಡು, ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಹುಡುಕಿಕೊಂಡು ತೆರಳುತ್ತಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಾರ್ಮಿಕ ಸುಶೀಲ್ ಕುಮಾರ್, ಕೊರೊನಾ ಸೋಂಕು ಉಲ್ಭಣಗೊಂಡಿದ್ದ ಕಾರಣ ಮನೆಗೆ ವಾಪಸ್ ಆಗಿದ್ದೆವು. ಮನೆಯಲ್ಲಿ ಏಳು ಜನರಿದ್ದೇವೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ, ಉದ್ಯೋಗಕ್ಕೆಂದು ಹರಿಯಾಣಕ್ಕೆ ವಲಸೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಒಂದೇ ಕುಟುಂಬದ ನಾಲ್ವರ ಮೇಲೆ ಗುಂಡಿನ ದಾಳಿ.. ಮೂವರ ದುರ್ಮರಣ
ಬಿಹಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಅದೇ ರಾಜ್ಯದಲ್ಲಿ ಕೆಲಸ ಸಿಗುವುದು ಕಷ್ಟ. ಹೀಗಾಗಿ, ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಕೂಲಿ ಕೆಲಸ ಮಾಡುತ್ತಾರೆ. ಪ್ರಮುಖವಾಗಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬೆಂಗಳೂರು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.